ರಾಯಚೂರು: ರಾಯಚೂರು ಸಂಸದ ಬಿ.ವಿ. ನಾಯಕ ಅವರು ಭಾರತೀಯ ಸೇನೆಯನ್ನು ಅವಮಾನಿಸಿ, ಪಾಕಿಸ್ತಾನವನ್ನು ಪರೋಕ್ಷವಾಗಿ ಬೆಂಬಲಿಸಿ ಹೇಳಿಕೆ ನೀಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದುಕೋರಿರಾಜ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ ರಾಜ್ಯ ಚುನಾವಣೆ ಸಮಿತಿಯ ಕಾನೂನು ಸಲಹೆಗಾರ ಎಂ. ವಿನೋದಕುಮಾರ ದೂರು ಸಲ್ಲಿಸಿದ್ದಾರೆ.
‘ಪಾಕಿಸ್ತಾನದ ಮೇಲಿನ ದಾಳಿ ಘಟನೆ ಬಳಿಕದೇವದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂಸದರು, ಸೇನೆಯ ಕಾರ್ಯಾಚರಣೆಯನ್ನು ಪ್ರಧಾನಮಂತ್ರಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಮೇಲೆ ದಾಳಿ ನಡೆಸುವುದು ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂದಿದ್ದರು. ಪ್ರಧಾನಿಯನ್ನು ಅವಮಾನಿಸಿದ್ದಲ್ಲದೆ, ದೇಶದ ಸುರಕ್ಷತೆಯನ್ನು ಪ್ರಶ್ನಿಸಿದ್ದಾರೆ. ಹಾಲಿ ಸಂಸದರಾಗಿದ್ದರೂ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಈ ಹೇಳಿಕೆ ನೀಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಸದರ ಹೇಳಿಕೆಯನ್ನು ಖಂಡಿಸಿ ದೂರು ಸಲ್ಲಿಸುವುದಾಗಿ ರಾಯಚೂರು ಜಿಲ್ಲಾ ಬಿಜೆಪಿ ಮುಖಂಡರು ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದ ಸಂಸದ ಬಿ.ವಿ. ನಾಯಕ ಅವರು ‘ನನ್ನ ಹೇಳಿಕೆಯನ್ನು ಕೆಲವು ಟಿವಿ ವಾಹಿನಿಯಲ್ಲಿ ಪೂರ್ಣ ತೋರಿಸುತ್ತಿಲ್ಲ. ಇದರಿಂದ ತಪ್ಪು ಸಂದೇಶ ಹೋಗಿದೆ. ನಾನೂ ದೇಶಭಕ್ತ. ಪಾಕಿಸ್ತಾನದ ಪರವಾಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.