ತಮಿಳುನಾಡಿನ ಕಮ್ಯುನಿಸ್ಟ್ ನಾಯಕಿ ಪಾರ್ವತಿ ಕೃಷ್ಣನ್ ಮೂರು ಸಲ ಲೋಕಸಭೆಗೆ, ಒಂದು ಸಲ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. 1919 ರಲ್ಲಿ ಜನಿಸಿದ 94 ವರ್ಷ ಬದುಕಿದ್ದ ಅವರು ಕೇರಳದಲ್ಲಿ ಕಾರ್ಮಿಕ ಚಳವಳಿಯ ನೇತೃತ್ವ ವಹಿಸಿದ್ದರು.
ಆಕ್ಸ್ಫರ್ಡ್ನಲ್ಲಿ ಬಿ.ಎ ಆನರ್ಸ್ ನಂತರ ಸಿಪಿಐ ಸೇರಿದರು. 1950ರ ಸುಮಾರಿಗೆ ಪಾರ್ವತಿ ಕೃಷ್ಣನ್ ಮತ್ತು ಅವರ ಪತಿ ಎನ್.ಕೃಷ್ಣನ್ ಕೊಯಮತ್ತೂರಿನ ವಾಳ್ಪರೆ ಭಾಗದ ಜವಳಿ ಮಿಲ್ ಮತ್ತು ಚಹಾ ತೋಟಗಳ ಕಾರ್ಮಿಕರ ಮಧ್ಯೆ ಕೆಲಸ ಮಾಡಿ ಅವರ ಹಕ್ಕುಗಳಿಗಾಗಿ ಹೋರಾಡಿದರು.
ಅಲ್ಲಿನ ಮಿಲ್ ಕೆಲಸಗಾರರ ಸಂಬಳ ಕುರಿತು ಇವರು ನಡೆಸಿದ ಹೋರಾಟ ಇಂದಿಗೂ ಗಮನಾರ್ಹ.ಲಂಡನ್ನಲ್ಲಿ ಉನ್ನತ ಅಧ್ಯಯನ ನಡೆಸಿದರು. ಸಾಕಷ್ಟು ಶ್ರೀಮಂತ ಕುಟುಂಬದಿಂದ ಬಂದ ಪಾರ್ವತಿ ಅವರು 80 ವರ್ಷ ತುಂಬುವವರೆಗೂ ಬಸ್ನಲ್ಲೇ ಪ್ರಯಾಣ ಮಾಡುತ್ತಿದ್ದರು.
ಪಾರ್ವತಿ ತುಂಬಾ ಓದುವ ಹವ್ಯಾಸ ಹೊಂದಿದ್ದರು. ಅವರ ಮನೆ ಎಲ್ಲಾ ರೀತಿಯ ಜನರಿಗೆ ಸದಾ ತೆರೆದಿರುತ್ತಿತ್ತು. ಇವರ ಸಹೋದರ ಮೋಹನ ಕುಮಾರ ಮಂಗಳಂ, ಇಂದಿರಾ ಗಾಂಧಿ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಇವರು ರಾಜಕೀಯಕ್ಕೆ ಬಂದಾಗ ಇವರ ಕುಟುಂಬದವರು ಹೊಂದಿದ್ದ 5,000 ಎಕರೆ ಭೂಮಿಯನ್ನು ಭೂರಹಿತರಿಗೆ ಹಂಚಲಾಯಿತು.
ಪಾರ್ವತಿ ಅವರು 1954ರಲ್ಲಿ ರಾಜ್ಯಸಭೆ ಪ್ರವೇಶಿಸಿದರು. ಮಹಿಳಾ ಹಕ್ಕುಗಳ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ 1957 ಮತ್ತು 1977ರಲ್ಲಿ ಕೊಯಮತ್ತೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1974ರ ಉಪಚುನಾವಣೆಯಲ್ಲಿ ಕೂಡ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.
ಮಹಿಳೆಯರ ಘನತೆಯ ವಿಷಯ ಬಂದರೆ ಬೆಂಕಿಯಾಗುತ್ತಿದ್ದ ಪಾರ್ವತಿ, ಲೋಕಸಭೆಯಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡಿದಾಗ ಕ್ಷಮೆ ಕೇಳುವಂತೆ ಮಾಡಿದ್ದರು! ಮಹಿಳೆಯರು ಸಾರ್ವಜನಿಕ ರಂಗದಲ್ಲಿ ಮುಂದೆ ಬರಬೇಕು, ಅವರೇ ಉಳಿದವರಿಗೆ ಮಾದರಿಯಾಗಬೇಕು ಎಂದೂ ಅವರು ಪ್ರತಿಪಾದಿಸುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.