ADVERTISEMENT

ಬಹು ವಿವಾದಿತ ವ್ಯಕ್ತಿತ್ವದ ಸಂಸದ ಅರುಣ್‌ ಶೌರಿ

ಜಿ.ಬಿ.ಹರೀಶ
Published 8 ಏಪ್ರಿಲ್ 2014, 19:34 IST
Last Updated 8 ಏಪ್ರಿಲ್ 2014, 19:34 IST

ಲೇಖಕ, ಪತ್ರಿಕೋದ್ಯಮಿ ಮತ್ತು ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ ಅಪ­ರೂಪದ ಸಂಸದ ಅರುಣ್ ಶೌರಿ. 1941ರಲ್ಲಿ  ಪಂಜಾಬಿನ ಜಲಂಧರ್‌ ನಲ್ಲಿ ಜನಿಸಿದ ಇವರು ಬಾರಾ­ಖಂಬ, ಸೈಂಟ್‌ ಸ್ಟೀಫನ್ಸ್‌ ಹೈಸ್ಕೂಲ್‌ಗಳಲ್ಲಿ ಅಧ್ಯಯನ ಮಾಡಿ, ಅಮೆರಿಕದ ಮ್ಯಾಕ್ಸ್‌ವೆಲ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದರು. ಇವರ ತಂದೆ ಹರಿದೇವ್‌ ಶೌರಿ ಮತ್ತು ಸ್ವತಃ ಅರುಣ್ ಶೌರಿಯವರು ಲೆಕ್ಕವಿರದಷ್ಟು ಸಾರ್ವ­ಜನಿಕ ಹಿತಾಸಕ್ತಿ ಮೊಕದ್ದಮೆ­ಗಳನ್ನು ಹಾಕಿ ಹೋರಾಟ ನಡೆಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಅರ್ಥಶಾಸ್ತ್ರಜ್ಞರಾಗಿ ಹಲವು ವರ್ಷ ಕೆಲಸ ಮಾಡಿದ ಇವರು ಯೋಜನಾ ಆಯೋಗದ ಸಲಹೆಗಾರರಾಗಿದ್ದರು.
ಬಿಜೆಪಿಯನ್ನು ಪ್ರತಿನಿಧಿಸಿ 1998ರಲ್ಲಿ ಶೌರಿ ರಾಜ್ಯಸಭಾ ಸದಸ್ಯರಾಗಿದ್ದರು. ತಮ್ಮ ನೇರ ಮೊನಚು ಬರಹಗಳಿಗೆ ಪ್ರಸಿದ್ಧರಾದ ಇವರು ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಷೇರು ವಿಕ್ರಯ ಖಾತೆ ಸಚಿವರಾ­ಗಿದ್ದರು. ಇಂಡಿಯನ್‌ ಎಕ್ಸ್‌ಪ್ರೆಸ್‌, ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ­ಗಳ ಸಂಪಾದಕರಾಗಿ ಉತ್ತಮ ಪತ್ರಕರ್ತರೆನಿಸಿಕೊಂಡರು. ರಾಜೀವ್ ಗಾಂಧಿಯ­ವರು ಪ್ರಧಾನಿ­ಯಾಗಿದ್ದ ಕಾಲದ ಬೊಫೋರ್ಸ್‌ ಹಗ­ರಣ ಮತ್ತು ಮಹಾರಾಷ್ಟ್ರದ ಎ.ಆರ್‌.ಅಂತುಳೆ ಸರ್ಕಾ­ರದ ಭ್ರಷ್ಟಾಚಾರ ಬಯಲಿಗೆಳೆದ ಕೀರ್ತಿ ಇವರದು. 
ಪದ್ಮಭೂಷಣ, ಮ್ಯಾಗ್ಸೆಸೆ ಸನ್ಮಾನಗಳನ್ನು ಪಡೆದಿ­ರುವ ಶೌರಿ ವೈಚಾರಿಕವಾಗಿ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ.

ಸ್ವತಃ ಹಿಂದುತ್ವ ಪ್ರತಿಪಾದಿಸಿದರೂ ವಿವಿಧ ಧರ್ಮ­ಗಳ ನೇರ ಅನುಸಂಧಾನ ಮಾಡಲು ಯತ್ನಿಸಿದ ಅರುಣ್ ಶೌರಿ, ಇತ್ತೀಚಿನ ವರ್ಷಗಳಲ್ಲಿ  ಬೌದ್ಧ ಗುರು ದಲೈ ಲಾಮಾ ಪ್ರಭಾವಕ್ಕೆ ಒಳಗಾಗಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.