ರಾಯ್ಬರೇಲಿಯಿಂದ ಸ್ಪರ್ಧೆ ಇಲ್ಲ: ಇಲ್ಮಿ
ನವದೆಹಲಿ(ಪಿಟಿಐ): ರಾಯ್ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಶಾಜಿಯಾ ಇಲ್ಮಿ ಸ್ಪಷ್ಟಪಡಿಸಿದ್ದಾರೆ.
‘ನಾನು ರಾಯ್ಬರೇಲಿಯಿಂದ ಸ್ಪರ್ಧಿಸುವುದಿಲ್ಲ ಎಂದು ಎರಡು ತಿಂಗಳುಗಳಿಂದ ಹೇಳುತ್ತಲೇ ಬಂದಿದ್ದೇನೆ’ ಎಂದು ಬುಧವಾರ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ಬರೇಲಿಯಿಂದ ಇಲ್ಮಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹ ಇತ್ತು. ಶಾಜಿಯಾ ಅವರನ್ನು ರಾಯ್ಬರೇಲಿಯಿಂದ ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿತ್ತು. ಸಲ್ಮಾನ್ ಖುರ್ಷಿದ್್ ಪ್ರತಿನಿಧಿಸುವ ಫರೂಕಾಬಾದ್ ಅಥವಾ ದೆಹಲಿಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ರಾಹುಲ್ ವಿರುದ್ಧ ಮಾನನಷ್ಟ ಖಟ್ಲೆ
ಲಖನೌ (ಐಎಎನ್ಎಸ್): ಮಹಾತ್ಮ ಗಾಂಧಿ ಹತ್ಯೆಯಲ್ಲಿ ಆರ್ಎಸ್ಎಸ್ ಕೈವಾಡವಿದೆ ಎಂಬ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಲಖಿಂಪುರ ಕೆೇರಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
‘ಪೀಪಲ್ಸ್ ಫಾರ್ ಲೀಗಲ್ ಏಯ್ಡ್ ಸೊಸೈಟಿ’ ಸಂಚಾಲಕ ಹಾಗೂ ವಕೀಲರಾದ ಸನು ಶುಕ್ಲಾ ಎಂಬವರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ. ‘ಗಾಂಧಿ ಹತ್ಯೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆರ್ಎಸ್ಎಸ್ನ ಕೈವಾಡ ಇಲ್ಲ ಎಂದು ಕಪೂರ್ ವಿಚಾರಣಾ ಆಯೋಗ ಹೇಳಿದ್ದರೂ ರಾಹುಲ್ ಮಿಥ್ಯಾರೋಪ ಮಾಡಿದ್ದಾರೆ. ಇದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಆರ್ಎಸ್ಎಸ್ನ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವ ಪ್ರಯತ್ನ ಇದು ಎಂದು ಅವರು ಆರೋಪಿಸಿದ್ದಾರೆ.
ಜನರ ದೇಣಿಗೆ ಕೋರಿದ ಟಿಆರ್ಎಸ್
ಹೈದರಾಬಾದ್ (ಪಿಟಿಐ): ಆಮ್ ಆದ್ಮಿ ಪಕ್ಷ , ಬಿಜೆಪಿಯ ನಂತರ ಈಗ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕೂಡ ಆಂಧ್ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೆಚ್ಚಕ್ಕೆ ಜನರು ದೇಣಿಗೆ ನೀಡಬೇಕು ಎಂದು ಕೋರಿದೆ.
ತೆಲಂಗಾಣ ಬೆಂಬಲಿಗರ ಸಮಾವೇಶದಲ್ಲಿ ಪಕ್ಷದ ಅಧ್ಯಕ್ಷ ಕೆ ಚಂದ್ರಶೇಖರ ರಾವ್, ‘ಮೊದಲ ಬಾರಿ ಪಕ್ಷ ಹಣ ಕೇಳುತ್ತಿದೆ. ನಿಮ್ಮ ಶಕ್ತಿ ಅನುಸಾರ ದೇಣಿಗೆ ನೀಡಿ’ ಎಂದು ವಿನಂತಿಸಿದರು. ಪಕ್ಷದ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಿಳಿಸಿದರು. ರಾವ್ ಹೀಗೆ ಕೋರಿಕೆ ಮುಂದಿಡುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರೊಬ್ಬರು ₨ 5 ಲಕ್ಷ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ಲೈಂಗಿಕ ಅಲ್ಪಸಂಖ್ಯಾತರಿಗೆ ಆದ್ಯತೆ
ಪಣಜಿ (ಪಿಟಿಐ): ಗೋವಾ ಸುರಾಜ್ ಪಕ್ಷವು ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.
‘ಗೋವಾದಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರು ಬಡತನ ಮತ್ತು ನಿಲರ್ಕ್ಷ್ಯದಿಂದಾಗಿ ಭಿಕ್ಷೆ ಬೇಡುವ ಮತ್ತು ವೇಶ್ಯಾವಾಟಿಕೆ ನಡೆಸುವ ಸ್ಥಿತಿಗೆ ಇಳಿದಿದ್ದಾರೆ’ ಎಂದು ಗೋವಾ ಸುರಾಜ್ ಪಕ್ಷದ ಕಾರ್ಯದರ್ಶಿ ಸಾವಿಯೊ ರಾಡ್ರಿಗಸ್ ಹೇಳಿದ್ದಾರೆ.
14 ವರ್ಷದ ಪಕ್ಷವು ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸುತ್ತಿದೆ. ಇತರ ಪಕ್ಷಗಳು ನಿರ್ಲಕ್ಷಿಸಿರುವ ವಿಷಯಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ಹೊಸ ಸದಸ್ಯರ ನೋಂದಣಿ ಮೂಲಕ ಪಕ್ಷಕ್ಕೆ ಪುನಶ್ಚೇತನ ನೀಡಲು ನಿರ್ಧರಿಸಲಾಗಿದೆ.
ಸಿಪಿಐ ಪಟ್ಟಿ ಅಂತಿಮ
ತಿರುವನಂತಪುರ (ಪಿಟಿಐ): ಲೋಕಸಭೆ ಚುನಾವಣೆಗೆ ಸಿಪಿಐ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಸಿಪಿಎಂ ನೇತೃತ್ವದ ಎಲ್ಡಿಎಫ್ನ ಅಂಗಪಕ್ಷವಾದ ಸಿಪಿಐ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಏಪ್ರಿಲ್ 10ರಂದು ಇಲ್ಲಿ ಚುನಾವಣೆ ನಡೆಯಲಿದೆ.
ಬಿಜೆಡಿ ಜತೆ ಹೊಂದಾಣಿಕೆ: ಸಿಪಿಐ
ಭುವನೇಶ್ವರ (ಪಿಟಿಐ): ಒಡಿಶಾದಲ್ಲಿ ಲೋಕಸಭೆ ಚುನಾವಣೆಯನ್ನು ಸ್ವಂತ ಶಕ್ತಿಯ ಮೇಲೆ ಎದುರಿಸಲು ಸಿಪಿಎಂ ಈಗಾಗಲೇ ತೀರ್ಮಾನ ಕೈಗೊಂಡಿದೆ. ಆದರೆ ಆಡಳಿತಾರೂಢ ಬಿಜು ಜನತಾ ದಳ ದೊಂದಿಗೆ (ಬಿಜೆಡಿ) ಸೀಟು ಹೊಂದಾಣಿಕೆ ಮಾಡಿಕೊಳ್ಳುವ ವಿಶ್ವಾಸವಿದೆ ಎಂದು ಸಿಪಿಐ ಹೇಳಿದೆ.
‘2009ರ ಚುನಾವಣೆಯಲ್ಲಿ ಮಾಡಿಕೊಂಡಂತೆ ಈ ಸಲವೂ ಸೀಟು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಆಗ ಒಂದು ಲೋಕಸಭೆ ಮತ್ತು ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆವು. ಈಗ ಮತ್ತದೇ ರೀತಿಯಲ್ಲಿ ಸ್ಪರ್ಧಿಸುವ ಇರಾದೆ ಇದೆ’ ಎಂದು ಎರಡು ದಿನಗಳ ಒಡಿಶಾ ಪ್ರವಾಸದಲ್ಲಿರುವ ಸಿಪಿಐ ಹಿರಿಯ ಮುಖಂಡ ಎ.ಬಿ. ಬರ್ಧನ್ ಅವರು ತಿಳಿಸಿದ್ದಾರೆ.
‘ಬಿಜೆಪಿ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಒಂದುವೇಳೆ ಅವರು ಬಯಸಿದಲ್ಲಿ ಸೀಟು ಹೊಂದಾಣಿಕೆ ಕುರಿತು ಚರ್ಚಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.