ಉಡುಪಿ: ‘ರಾಮ ಬೇಕೋ, ಇಲ್ಲ ಅಲ್ಲಾಹು ಬೇಕೋ ಎಂಬುದನ್ನು ಬಂಟ್ವಾಳದ ಜನತೆ ನಿರ್ಧರಿಸಬೇಕು ಎಂದು ಸೋಮವಾರ ರಾತ್ರಿ ಕಲ್ಲಡ್ಕದಲ್ಲಿ ನೀಡಿದ ಹೇಳಿಕೆಗೆ ಈಗಲೂ ಬದ್ಧ’ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಹೇಳಿದರು.
ಕಲ್ಲಡ್ಕದಲ್ಲಿ ಸೋಮವಾರ ಮಾತನಾಡಿದ್ದ ಸುನಿಲ್ ಕುಮಾರ್, ‘ಮುಂದಿನ ಚುನಾವಣೆ ರಮಾನಾಥ ರೈ ಹಾಗೂ ರಾಜೇಶ್ ನಾಯ್ಕ್ ಮಧ್ಯೆ ಅಲ್ಲ, ಬದಲಿಗೆ ರಾಮ ಬೇಕೋ, ಇಲ್ಲ ಅಲ್ಲಾಹು ಬೇಕೋ ಎಂದು ನಿರ್ಧರಿಸಬೇಕು’ ಎಂದಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮಂಗಳವಾರ ಇಲ್ಲಿ ಅವರು ಪ್ರತಿಕ್ರಿಯಿಸಿದರು.
‘ಆರು ಬಾರಿ ಅಲ್ಲಾಹುವಿನ ಕೃಪೆಯಿಂದ ಗೆದ್ದಿದ್ದೇನೆ ಎಂದು ರಮಾನಾಥ ರೈ ಅವರು ಸ್ಪಷ್ಟವಾಗಿ ಹೇಳಿದ್ದರು. ಆದ್ದರಿಂದ ಆ ಕ್ಷೇತ್ರದ ಹಿಂದೂಗಳಿಗೆ ಅಪಮಾನವಾಗಿದೆ. ಅವರು ಮಾಡಿರುವ ಅಪಮಾನಕ್ಕೆ ಉತ್ತರ ಕೊಡಬೇಕಿದೆ. ಇನ್ನೂ ಹತ್ತು ಸಭೆಗಳಲ್ಲಿ ನಾನು ನನ್ನ ಹೇಳಿಕೆಯನ್ನು ನೀಡುತ್ತೇನೆ. ಅಧಿಕೃತವಾಗಿಯೇ ನಾನು ಮಾತನಾಡಿದ್ದೇನೆ’ ಎಂದರು.
ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ರಮಾನಾಥ ರೈ ಅವರು, ‘ಅಲ್ಲಾಹುವಿನ ಕೃಪೆಯಿಂದ ಆರು ಬಾರಿ ಶಾಸಕನಾಗಿದ್ದೇನೆ’ ಎನ್ನುವ ಹೇಳಿಕೆ ನೀಡಿದ್ದರು.
ಪ್ರಕರಣ ದಾಖಲು: ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ದೂರು ನೀಡಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಸುನೀಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.