ADVERTISEMENT

ಬಿಹಾರದಲ್ಲಿ ನಿತೀಶ್‌ಗೆ ಸಂಕಟದ ಸಮಯ

​ಪ್ರಜಾವಾಣಿ ವಾರ್ತೆ
Published 14 ಮೇ 2014, 19:30 IST
Last Updated 14 ಮೇ 2014, 19:30 IST

ಪಟ್ನಾ/ನವದೆಹಲಿ: ಬಿಹಾರದ ಒಟ್ಟು 40 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಯು ಕೇವಲ ಎರಡು ಅಥವಾ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ ಎನ್ನುವುದು ಮತಗಟ್ಟೆ ಸಮೀಕ್ಷೆಗಳು ನುಡಿದಿರುವ ಭವಿಷ್ಯ. ಹಾಗೇನಾದರೂ ಆದಲ್ಲಿ, ನಿತೀಶ್‌್ ಕುಮಾರ್‌್ ಸರ್ಕಾರದ ಹಣೆಬರಹ ಏನಾಗಬಹುದು ಎನ್ನುವುದು ಈಗ ಬಹು ಚರ್ಚಿತ ವಿಷಯ.

  ಕಳೆದ ಚುನಾವಣೆಯಲ್ಲಿ ಜೆಡಿಯು 20 ಹಾಗೂ ಬಿಜೆಪಿ 12 ಸ್ಥಾನಗಳನ್ನು ಗೆದ್ದಿದ್ದವು. ಜೆಡಿಯುನ ಕನಿಷ್ಠ 50 ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿದ್ದು, ಮೇ 16ರ ಫಲಿತಾಂಶದ ಬಳಿಕ ಇವರೆಲ್ಲ  ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ಹಿರಿಯ ಮುಖಂಡ,  ಮಾಜಿ ಉಪಮುಖ್ಯಮಂತ್ರಿ ಸುಶೀಲ್‌್ ಕುಮಾರ್‌್ ಮೋದಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ವಿಷಯವನ್ನು ದೃಢಪಡಿಸಿಲ್ಲ.

ಮೃತಪಟ್ಟವರು ಹಾಗೂ ರಾಜೀನಾಮೆ ಕೊಟ್ಟವರ ಕಾರಣದಿಂದ ಆರು ಸ್ಥಾನಗಳು ಖಾಲಿ ಆಗಿದ್ದು, ವಿಧಾನಸಭೆಯ ಬಲ 237ಕ್ಕೆ ಇಳಿದಿದೆ.
‘ನಮ್ಮಲ್ಲಿ ಅಗತ್ಯ ಬಲ ಇದೆ.  ಸರ್ಕಾರವನ್ನು ಬೀಳಿಸುವ ಧೈರ್ಯವನ್ನು ಬಿಜೆಪಿ ಮಾಡಬಾರದು’ ಎಂದು ನಿತೀಶ್‌ ಆಪ್ತರೊಬ್ಬರು ಎಚ್ಚರಿಸಿದ್ದಾರೆ.
‘ಸುಶೀಲ್‌್ ಕುಮಾರ್‌್ ಮೋದಿ ಹೇಳಿದ್ದು ನಿಜವೇ ಆದಲ್ಲಿ, ಅವರು ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತು­ವಳಿ ಮಂಡಿಸಲಿ. ಸದನಲ್ಲಿಯೇ ಎಲ್ಲವೂ ಸಾಬೀತಾಗಲಿ’ ಎಂದು ಸಚಿವ ಶ್ಯಾಂ ರಜಾಕ್‌್ ಹೇಳಿದ್ದಾರೆ.

‘ನಿತೀಶ್‌ ಅವರು ಸರ್ಕಾರದ ಭವಿಷ್ಯದ ಬಗ್ಗೆ ವೈಯಕ್ತಿಕವಾಗಿ ತಳಮಳಗೊಂಡಿಲ್ಲ. ಆಪ್ತರ ಜತೆ ನಡೆಸಿದ ಅನೌಪಚಾರಿಕ ಮಾತುಕತೆಯಲ್ಲಿ  ಮತಗಟ್ಟೆ ಸಮೀಕ್ಷೆಗಳನ್ನು ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕಾರಕ್ಕಾಗಿ ತತ್ವಗಳ ಜತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದೂ ನಿತೀಶ್‌್  ಹೇಳಿದ್ದಾರೆ’ ಎನ್ನುತ್ತವೆ ಮೂಲಗಳು.

ಈ ನಡುವೆ, ಎಲ್ಲರ ಚಿತ್ತ ಲಾಲು ಮೇಲೂ ಕೇಂದ್ರೀಕೃತವಾಗಲಿದೆ. ಲೋಕಸಭೆ ಚುನಾವಣೆ ಬಳಿಕ ಅವರು  ತಮ್ಮ ಬಲ ಹೆಚ್ಚಿಸಿಕೊಂಡಲ್ಲಿ,  ಕಾಂಗ್ರೆಸ್‌ ಪಕ್ಷವು ನಿತೀಶ್‌್ ಸರ್ಕಾರಕ್ಕೆ ಕೊಟ್ಟ ಬೆಂಬಲ ವಾಪಸ್‌್ ಪಡೆಯಬೇಕೆಂದು ಬಯಸುತ್ತಾರೆ.

ಆದರೆ ಮೇ 16ರ ವರೆಗೂ ಅವರು ಈ ಬಗ್ಗೆ ಏನನ್ನೂ ಮಾತನಾಡಲು ಬಯಸುವುದಿಲ್ಲ. ‘ಲೋಕಸಭೆ ಚುನಾವಣೆ ಸಮಯದಲ್ಲಿ ವಿಧಾನಸಭೆ ಬಗ್ಗೆ ಮಾತನಾಡುವುದು ಸರಿಯಲ್ಲ. ನೀವು ರಾಂಚಿಗೆ ಹೋದರೆ ಕರಾಚಿ ಬಗ್ಗೆ ಮಾತನಾಡುವಿರಾ’ ಎಂದು ಲಾಲು ತಮ್ಮ ಎಂದಿನ ಹಾಸ್ಯಮಿಶ್ರಿತ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT