ನವದೆಹಲಿ (ಪಿಟಿಐ): ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರಾಜೀನಾಮೆಯ ನಂತರ ಬಿಜೆಪಿ ಸರ್ಕಾರ ರಚಿಸಲು ಹಕ್ಕು ಮಂಡಿಸುವ ಸಾಧ್ಯತೆ ಇದ್ದುದ್ದರಿಂದ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ದೆಹಲಿ ವಿಧಾನಸಭೆಯನ್ನು ವಿಸರ್ಜಿಸದೇ ಅಮಾನತಿನಲ್ಲಿ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಅಲ್ಪಾವಧಿಯಲ್ಲಿ ಮತ್ತೊಂದು ಚುನಾವಣೆ ನಡೆಸುವುದು ಸಾರ್ವಜನಿಕ ಹಿತಾಸಕ್ತಿಯಿಂದ ಸರಿಯಲ್ಲ ಎಂದು ಲೆ. ಗರ್ವನರ್ ಅವರು ಶಿಫಾರಸು ಮಾಡಿದ್ದರಿಂದ ದೆಹಲಿ ವಿಧಾನಸಭೆ ವಿಸರ್ಜಿಸದೇ ಅಮಾನತಿನಲ್ಲಿಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ.
2013ರ ಡಿಸೆಂಬರ್ ಮೊದಲ ವಾರದಲ್ಲಿ ಚುನಾವಣೆ ನಡೆಸಿ ಡಿ. 28ರಂದು ಸರ್ಕಾರ ರಚಿಸಲಾಯಿತು. ಈಗ ಪುನಃ ಚುನಾವಣೆ ನಡೆಸುವುದು ಸಾರ್ವಜನಿಕ ಹಿತಾಸಕ್ತಿಯಿಂದ ಯುಕ್ತವಲ್ಲ ಎಂದು ಲೆ. ಗವರ್ನರ್ ಅವರು ಶಿಫಾರಸು ಮಾಡಿದ್ದರು. ಲೆ. ಗವರ್ನರ್ ಮಾಡಿದ್ದ ಶಿಫಾರಸು ಸರಿಯಾಗಿಯೂ ಮತ್ತು ಆ ಸಂದರ್ಭದಲ್ಲಿ ಪ್ರಸ್ತುತವೂ ಆಗಿತ್ತು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ದೆಹಲಿಯಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯನ್ನು ಪ್ರಶ್ನಿಸಿ ಎಎಪಿ ಫೆ. 24ರಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ದೆಹಲಿ ವಿಧಾನಸಭೆ ವಿಸರ್ಜಿಸಿ, ಚುನಾವಣೆ ನಡೆಸುವಂತೆ ದೆಹಲಿ ಲೆ. ಗವರ್ನರ್ ನಿರ್ದೇಶನ ನೀಡಬೇಕೆಂದೂ ಎಎಪಿ ಕೋರ್ಟ್ಗೆ ಮನವಿ ಮಾಡಿತ್ತು.
ಬಿಜೆಪಿ ಹಾಗೂ ಕಾಂಗ್ರೆಸ್ಗೆ ನೋಟಿಸ್ ಜಾರಿ ಮಾಡಿದ ಕೋರ್ಟ್, ಸಂವಿಧಾನಾತ್ಮಕ ದೃಷ್ಟಿಯಿಂದ ಮಾತ್ರ ಕೋರ್ಟ್ ಪ್ರಕರಣದ ವಿಚಾರಣೆ ನಡೆ-ಸುತ್ತದೆಯೇ ಹೊರತು ರಾಜಕೀಯ ದೃಷ್ಟಿಕೋನದಿಂದ ಅಲ್ಲ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.