ನವದೆಹಲಿ: ಮೋದಿ ನೇತೃತ್ವದ ಹೊಸ ಸರ್ಕಾರದಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಸ್ಥಾನ ಪಡೆಯುವ ಕುರಿತು ಇದೀಗ ಮರುಚಿಂತನೆ ಆರಂಭವಾಗಿದ್ದು ಈ ವಿಚಾರದಲ್ಲಿ ಆರ್ಎಸ್ಎಸ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಲಾಗಿದೆ.
ಹೊಸ ಸರ್ಕಾರದಲ್ಲಿ ರಾಜನಾಥ್ ಸಚಿವರಾಗದೆ ಪಕ್ಷದ ಅಧ್ಯಕ್ಷರಾಗೇ ಉಳಿಯುತ್ತಾರೆ ಎಂದು ಈ ಮೊದಲು ಬಿಜೆಪಿ ಮುಖಂಡರು ತಿಳಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ರಾಜನಾಥ್ ಅವರಿಗೆ ಪ್ರಮುಖ ಖಾತೆ ನೀಡಲಾಗುತ್ತದೆ ಎನ್ನುವ ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಪಕ್ಷದ ವಲಯದಲ್ಲಿ ಗೊಂದಲ ಏರ್ಪಟ್ಟಿತ್ತು.
ಫಲಿತಾಂಶಕ್ಕೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಗೆ
ಈ ನಡುವೆ ಫಲಿತಾಂಶ ಹೊರಬೀಳುವ ಮೊದಲೇ ಸೊಲೊಪ್ಪಿಕೊಂಡಿರುವ ಪೂರ್ವ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, ಭ್ರಷ್ಟಾಚಾರ ವಿರೋಧಿ ಅಲೆಯಿಂದಾಗಿ ಗೆಲುವು ಕಷ್ಟಕರ ಎಂದಿದ್ದಾರೆ. ಆಂಧ್ರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬೋತ್ಸಾ ಸತ್ಯನಾರಾಯಣ ಅವರೂ ಸಹ ಇದೇ ರೀತಿಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಎನ್ಡಿಎಗೆ ಬೆಂಬಲ ಇಲ್ಲ: ಡಿಎಂಕೆ
ನವದೆಹಲಿ (ಪಿಟಿಐ): ನರೇಂದ್ರ ಮೋದಿ ನೇತೃತ್ವದಲ್ಲಿ ರಚನೆಯಾಗಲಿರುವ ಎನ್ಡಿಎ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಡಿಎಂಕೆ ಗುರುವಾರ ಸ್ಪಷ್ಟಪಡಿಸಿದೆ.
೨೦೦೨ರ ಗೋಧ್ರಾ ಗಲಭೆಯ ಹಿನ್ನೆಲೆಯಲ್ಲಿ ಮೋದಿ ಸರ್ಕಾರವನ್ನು ಬೆಂಬಲಿಸುವುದಿಲ್ಲ, ಜಾತ್ಯತೀತ ಸರ್ಕಾರಕ್ಕೆ ಮಾತ್ರ ನಮ್ಮ ಬೆಂಬಲವಿದೆ ಎಂದು ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್ ತಿಳಿಸಿದರು.
ಈ ನಡುವೆ ಕಾಂಗ್ರೆಸ್ ನಾಯಕ ರಷೀದ್ ಆಳ್ವಿ ಮಾತನಾಡಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಟಿಎಂಸಿ ನೇತೃತ್ವದಲ್ಲಿ ಎಲ್ಲ ಪ್ರಾದೇಶಿಕ ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.