ಹೈದರಾಬಾದ್: ಮತದಾನದ ಮಹತ್ವ ಸಾರಲು ಟಾಲಿವುಡ್ನಲ್ಲಿ ಚಲನಚಿತ್ರವೊಂದನ್ನು ನಿರ್ಮಿಸಲಾಗುತ್ತಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಹೋಲುವ ಪಾತ್ರ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿದೆ.
ತೆಲುಗು ಹಾಸ್ಯ ನಟ ಎಂ.ಎಸ್. ನಾರಾಯಣ ಅವರು ಕೇಜ್ರಿವಾಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಪ್ರಧಾನವಾಗಿರುವ ಈ ವಿಡಂಬನಾತ್ಮಕ ಚಿತ್ರದ ಹೆಸರು ‘ಕ್ರೇಜಿವಾಲಾ’. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಉದ್ದೇಶಿಸಲಾಗಿದ್ದು, ಈ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.
ನಾರಾಯಣ ಅವರು ಮೊಹಮ್ಮದ್ ಗಡಾಫಿ ಸೇರಿ ಹಲವು ರಾಜಕೀಯ ವ್ಯಕ್ತಿಗಳ ಪಾತ್ರದಲ್ಲಿ ನಟಿಸಿದ್ದಾರೆ. ‘ಕ್ರೇಜಿವಾಲಾ’ ಚಿತ್ರದಲ್ಲಿ ಅವರು ಕೇಜ್ರಿವಾಲ್ ಅನುಕರಣೆ ಮಾಡಲಿದ್ದಾರೆ.
‘ಕ್ರೇಜಿವಾಲಾ’ ಚಿತ್ರ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಕುರಿತಾಗಿ ಇಲ್ಲ. ಮತದಾನದ ಹಕ್ಕಿನ ಕುರಿತು ಜಾಗೃತಿ ಮೂಡಿಸಲು ಮಾಡುತ್ತಿರುವ ಸಣ್ಣ ಪ್ರಯತ್ನ ಎಂದು ಚಿತ್ರ ನಿರ್ದೇಶಕ ಮೊಹನಾ ಪ್ರಸಾದ್ ತಿಳಿಸಿದ್ದಾರೆ.
‘ಎಎಪಿ ಅನುಮತಿ ಪಡೆದ ಬಳಿಕವಷ್ಟೇ ಚಿತ್ರೀಕರಣ ಆರಂಭಿಸಲಾಗಿದೆ. ಅಗತ್ಯಬಿದ್ದಲ್ಲಿ ಅವರಿಗೆ ಚಿತ್ರ ತೋರಿಸುತ್ತೇವೆ’ ಎಂದು ಪ್ರಸಾದ್ ಹೇಳಿದ್ದಾರೆ.
‘ಚಿತ್ರದ ಪೋಸ್ಟರ್ಗಳಲ್ಲಿ ನಾರಾಯಣ ಅವರು ಕೇಜ್ರಿವಾಲ್ನಂತೆ ಕಾಣಿಸಿಕೊಂಡಿದ್ದಾರೆ. ಆದರೆ, ನಮ್ಮ ಉದ್ದೇಶ ಎಎಪಿ ಮುಖಂಡನ ಕುರಿತು ಚಿತ್ರ ಮಾಡುವುದಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ನಿಮ್ಮ ಹಣೆಬರಹ ನಿಮ್ಮ ಕೈಯಲ್ಲೇ ಇದೆ. ಉತ್ತಮ ನಾಯಕರನ್ನು ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ಜನರಲ್ಲಿ ಅರಿವು ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಫಿಲ್ಮ್ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ನಾವು ಕೇವಲ ಕೇಜ್ರಿವಾಲ್ ಅವರ ವೇಷವನ್ನು ಮಾತ್ರ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಜನರ ಕುತೂಹಲ ಸೆಳೆಯಲು ಮತ್ತು ಆ ಪಕ್ಷದ ಕೆಲ ಉತ್ತಮ ವಿಚಾರಧಾರೆಗಳನ್ನು ಪ್ರಸ್ತಾಪಿಸಿದ್ದೇವೆ. ಆದರೆ, ನಮ್ಮ ಅಂತಿಮ ಉದ್ದೇಶ ಮತದಾನದ ಮಹತ್ವ ಸಾರುವುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.