ನವದೆಹಲಿ (ಪಿಟಿಐ): ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಂದ ಪುಕ್ಕಟೆ ಲಾಭ ಪಡೆದುಕೊಳ್ಳುವ ದೂರಾಲೋಚನೆಯಿಂದ ಕಾರ್ಪೊರೇಟ್ ವಲಯ ಮೋದಿ ಪ್ರಚಾರಕ್ಕೆ ನೆರವಾಗುತ್ತಿದೆ’ ಎಂದು ಕಾನೂನು ಸಚಿವ ಕಪಿಲ್ ಸಿಬಿಲ್ ವ್ಯಂಗ್ಯವಾಡಿದ್ದಾರೆ.
‘ವಿವಿಧ ರಾಜ್ಯಗಳಲ್ಲಿ ಬಿಜೆಪಿ ವಿಶ್ವಾಸಯೋಗ್ಯ ಮೈತ್ರಿ ಮಾಡಿಕೊಳ್ಳಲು ವಿಫಲವಾಗಿದೆ‘ ಎಂದೂ ಅವರು ಟೀಕಿಸಿದ್ದಾರೆ.
ಸಿಎನ್ಎನ್–ಐಬಿಎನ್ನ ಡೆವಿಲ್ಸ್ ಅಡ್ವೊಕೇಟ್ ಕಾರ್ಯಕ್ರಮದಲ್ಲಿ ಕರಣ್ ಥಾಪರ್ ಕೇಳಿದ ಕೆಲವು ಪ್ರಶ್ನೆಗಳಿಗೆ ಸಿಬಲ್ ಖಾರವಾಗಿಯೇ ಉತ್ತರಿಸಿದರು.
*ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾದ ಬಳಿಕ ಸಂವೇದಿ ಸೂಚ್ಯಂಕ ಏರಿದೆ ಎಂಬ ಮಾತಿದೆಯಲ್ಲ?
ಉ: ಕಾರ್ಪೊರೇಟ್ ಜಗತ್ತು ಮೋದಿ ಮುಷ್ಟಿಯಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತು.
*ನೀವು ಈ ಆರೋಪ ಮಾಡುತ್ತಿದ್ದೀರಾ?
ಉ: ಹಾಗೇನೂ ಇಲ್ಲ. ಇದು ನಮಗೆ ಗೊತ್ತಿರುವ ಸತ್ಯ.
*ಕಾರ್ಪೊರೇಟ್ ಕ್ಷೇತ್ರ ಅಥವಾ ಮಾಧ್ಯಮವನ್ನು ಮೋದಿ ಖರೀದಿ ಮಾಡಿದ್ದಾರಾ?
ಉ: ನಾನೇನು ಆ ರೀತಿ ಹೇಳಿಲ್ಲವಲ್ಲ. ಒಂದು ಪ್ಲೇಟ್ ಡಿನ್ನರ್ಗೆ ರೂ2.50 ಲಕ್ಷ. ಉದ್ಯಮ ಸಮುದಾಯಕ್ಕೆ ಏನು ಬೇಕು ಎನ್ನುವುದನ್ನು ಇದು ಸೂಚಿಸುವುದಿಲ್ಲವೇ? ಇವರಿಗೆಲ್ಲ ಪುಕ್ಕಟೆ ಲಾಭ ಬೇಕು. ಹಾಗಾಗಿ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಗುಜರಾತ್ನಲ್ಲಿ ಉದ್ಯಮ ವಲಯಕ್ಕೆ ಮೋದಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರೇ ಈಗ ಮೋದಿ ಪ್ರಚಾರಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ನಾನು ಇಲ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ.
*2009ರ ಚುನಾವಣೆಗಿಂತ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ರಾಹುಲ್್ ಗಾಂಧಿ ನೀಡಿದ ಹೇಳಿಕೆಗೆ ಜನ ನಗುತ್ತಿದ್ದಾರಲ್ಲ?
ಉ: ರಾಹುಲ್ ಎಲ್ಲಿ, ಯಾವಾಗ, ಏನು ಹೇಳಿದರು ಮತ್ತು ಅವರ ಮನಸ್ಸಿನಲ್ಲಿ ಏನಿತ್ತು, ಅವರು ಹೇಳಿದ್ದು ಸರಿಯೋ ತಪ್ಪೋ ಎಂಬುದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ.
*ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ನ ಕೆಲವು ಮುಖಂಡರು ಬಿಜೆಪಿಗೆ ಸೇರಿದರಲ್ಲ?
ಉ: ಜಗದಾಂಬಿಕಾ ಪಾಲ್ ಅವರಂಥ ನಾಯಕರು ಪಕ್ಷದಿಂದ ತೊಲಗಿದ್ದು ಕಾಂಗ್ರೆಸ್ಗೆ ಒಳ್ಳೆಯದೇ ಆಯಿತು. ಅದೇ ರೀತಿ ಇತ್ತೀಚೆಗೆ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿ ಎನ್ಡಿಎ ಸೇರಿದ್ದು ಕೂಡ ನಮಗೆ ಒಂದು ರೀತಿಯ ಬಿಡುಗಡೆಯ ಖುಷಿ ಕೊಟ್ಟಿದೆ.
* ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತೀರಿ?
ಉ: ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ನ ಯಾವ ಸಚಿವರ ಮೇಲೂ ಇಂಥ ಆರೋಪ ಹೊರಿಸಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.