ಮಚಲಿಪಟ್ಟಣ: ವಿರೋಧ ಪಕ್ಷಗಳ ಮೇಲೆ ತೀವ್ರ ಟೀಕಾಸ್ತ್ರ ಪ್ರಯೋಗಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ‘ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಮೋದಿಯ ಸಾಕುನಾಯಿಗಳು’ ಎಂದಿದ್ದಾರೆ.
ಮಂಗಳವಾರ ಸಂಜೆ ಇಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ ಮೋದಿ ಎಸೆದ ಬಿಸ್ಕೆಟ್ಗಳನ್ನುಜಗನ್ಮೋಹನ್ ತಿನ್ನುತ್ತಿದ್ದಾರೆ. ಜನರಿಗೂ ಅವುಗಳನ್ನು ಹಂಚುತ್ತಿದ್ದಾರೆ. ಒಂದು ಬಿಸ್ಕೆಟ್ ಎಸೆದರೆ ಈ ಇಬ್ಬರು ನಾಯಕರು ಮೋದಿಯ ಕಾಲಬುಡದಲ್ಲಿ ಬಂದು ಕೂರುತ್ತಾರೆ. ಜಗನ್ ಆ ಬಿಸ್ಕೆಟ್ಗಳನ್ನು ನಿಮಗೂ ಕೊಡಬಹುದು, ಎಚ್ಚರವಿರಲಿ’ ಎಂದಿದ್ದಾರೆ.
‘ಮೋದಿ ಮತ್ತು ಕೆಸಿಆರ್ ಅವರು ಜಗನ್ಮೋಹನ್ ಅವರ ಪ್ರಚಾರಕ್ಕೆ ಹಣ ನೀಡುತ್ತಿದ್ದಾರೆ’ ಎಂದು ಆರೋಪಿಸಿದ ನಾಯ್ಡು, ‘ಎಷ್ಟೇ ಕೋಟಿ ವೆಚ್ಚಮಾಡಿದರೂ ಚುನಾವಣೆ ಗೆಲ್ಲಲು ಅವರಿಗೆ ಸಾಧ್ಯವಾಗದು’ ಎಂದರು.
ಜಗನ್ಮೋಹನ್ ಅವರ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಮೋದಿ ಮತ್ತು ಕೆಸಿಆರ್ ಒಂದು ಸಾವಿರ ಕೋಟಿ ರೂಪಾಯಿ ನೀಡಿದ್ದಾರೆ. ತೆಲಂಗಾಣ ರಾಜ್ಯದ ಹಣವನ್ನು ನಮ್ಮ ರಾಜ್ಯದಲ್ಲಿ ಖರ್ಚು ಮಾಡುವ ಅಗತ್ಯವಾದರೂ ಏನು? ಅವರೇಕೆ ಹಣ ಕೊಡುತ್ತಿದ್ದಾರೆ? ಹತ್ತು ಸಾವಿರ ಕೋಟಿ ಕೊಟ್ಟರೂ ಅವರ ಉದ್ದೇಶ ಈಡೇರದು ಎಂದು ನಾಯ್ಡು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.