ADVERTISEMENT

ದಕ್ಷಿಣದ ಕ್ಷೇತ್ರಗಳತ್ತ ಜೆಡಿಎಸ್‌ ಚಿತ್ತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 18:40 IST
Last Updated 22 ಸೆಪ್ಟೆಂಬರ್ 2019, 18:40 IST

ಬೆಂಗಳೂರು: ಉಪಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿರತರಾಗಿದ್ದಾರೆ.

ಪ್ರಮುಖವಾಗಿ ಬೆಂಗಳೂರು, ಮೈಸೂರು ಭಾಗದ ಕ್ಷೇತ್ರಗಳನ್ನು ಕೇಂದ್ರೀಕರಿಸಿದ್ದು, ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದಾರೆ. ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೂ ಒಂದೆರಡು ದಿನಗಳಲ್ಲಿ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಶವಂತಪುರ ಕ್ಷೇತ್ರದಲ್ಲಿ ಟಿ.ಎನ್.ಜವರಾಯಿಗೌಡ ಹೆಸರು ಅಂತಿಮಗೊಳಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಸೋಮಶೇಖರ್ ವಿರುದ್ಧ ಸೋತಿದ್ದು, ಮತ್ತೊಮ್ಮೆ ಅವರನ್ನು ಕಣ್ಣಕ್ಕಿಳಿಸಲಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಆರ್.ವಿ.ಹರೀಶ್ ಹೆಸರು ಮುಂಚೂಣಿಯಲ್ಲಿದೆ. ಶಿವಾಜಿನಗರದಿಂದ ಅನ್ವರ್, ಇಮ್ರಾನ್ ಪಾಷಾ, ರಮೇಶ್ ಬಾಬು ಹೆಸರುಗಳು ಚರ್ಚೆಯಾಗಿವೆ.

ADVERTISEMENT

ಹುಣಸೂರು ಕ್ಷೇತ್ರಕ್ಕೆ ಭವಾನಿ ರೇವಣ್ಣ ಅವರನ್ನು ನಿಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಕುಟುಂಬದವರು ನಿಲ್ಲುವುದು ಬೇಡ ಎಂದು ದೇವೇಗೌಡ ಸಲಹೆ ಮಾಡಿದ್ದಾರೆ ಎನ್ನಲಾಗಿದ್ದು, ಹುಣಸೂರಿನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಸ್ಥಳೀಯರಿಗೆ ಅವಕಾಶ ನೀಡುವಂತೆ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮಾಜಿ ಶಾಸಕ ಕರಿಯಪ್ಪಗೌಡ ಪುತ್ರ ಗಣೇಶಗೌಡ, ಚಿಕ್ಕಮಾದು ಪುತ್ರಿ ಮಮತಾ, ಹಿನಕಲ್ ಕೆಂಪನಾಯಕ ಹೆಸರುಗಳು ಪ್ರಸ್ತಾಪವಾಗಿವೆ.

ಕೆ.ಆರ್.ಪೇಟೆ ಕ್ಷೇತ್ರವನ್ನು ಮತ್ತೊಮ್ಮೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಲ್.ದೇವರಾಜ್, ಎಚ್.ಟಿ.ಮಂಜು, ಕೃಷ್ಣೇಗೌಡ ಹೆಸರು ಮುಂಚೂಣಿಯಲ್ಲಿದ್ದು, ದೇವರಾಜ್ ಅವರಿಗೆ ಟಿಕೆಟ್ ಸಿಗುವ ಸಾದ್ಯತೆಗಳಿವೆ.

ಉಳಿದ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳಿಗಾಗಿ ಜೆಡಿಎಸ್ ಮುಖಂಡರು ತಲಾಶೆ ನಡೆಸಿದ್ದಾರೆ.

ಸೋಮವಾರವೂ ಜೆಡಿಎಸ್ ಮುಖಂಡರ ಸಭೆ ಮುಂದುವರಿಯಲಿದ್ದು, ಈ ಸಂದರ್ಭದಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುತ್ತದೆ.

ಅನರ್ಹರ ಪರ ಬಿಎಸ್‌.ವೈ ವಕಾಲತ್ತು’

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯದಲ್ಲಿ ಪ್ರವಾಹದಿಂದ ಜನರು ತತ್ತರಿಸಿದ್ದರೂ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಯಡಿಯೂರಪ್ಪ ದೆಹಲಿಗೆ ಹೋಗಿರುವುದು ಪ್ರವಾಹ ಪರಿಹಾರ ಕೇಳುವುದಕ್ಕಲ್ಲ. ಬದಲಾಗಿ ಅನರ್ಹ ಶಾಸಕರ ಪರ ವಕಲಾತ್ತು ವಹಿಸಿ, ಸರ್ಕಾರ ಉಳಿಸಿಕೊಳ್ಳಲು ಕಸರತ್ತು ಮಾಡಲು’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.