ADVERTISEMENT

ಕೃಷ್ಣ ಸ್ಪರ್ಧೆಗೆ ವಾಟಾಳ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಬೆಂಗಳೂರು: ‘ಅತ್ಯುತ್ತಮ ಸಂಸದೀಯ ಪಟು ಎಸ್‌.ಎಂ. ಕೃಷ್ಣ ಅವರನ್ನು ಕಾಂಗ್ರೆಸ್‌ ಪಕ್ಷವು ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಿಂದ ಕಣಕ್ಕೆ ಇಳಿಸ­ಬೇಕು. ಎಚ್‌.ಡಿ. ದೇವೇಗೌಡ ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕ­ಬಾರದು’ ಎಂದು  ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಾಫರ್‌ ಷರೀಫ್‌, ಡಿ.ಬಿ. ಚಂದ್ರೇಗೌಡ, ಜನಾರ್ದನ ಪೂಜಾರಿ, ಬಿ.ಕೆ. ಚಂದ್ರಶೇಖರ್‌ ಅವರಂ­ತಹ ನಾಯಕರು ಸಂಸತ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಬೇಕು’ ಎಂದು ಅಭಿಪ್ರಾಯ­­ಪಟ್ಟರು. ‘ಇಂಥವರು ನೆಲ– ಜಲದ ವಿಷಯವೂ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆ­ಗಳ ಕುರಿತು ಲೋಕಸಭೆ ಕಲಾಪಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸಬಲ್ಲರು’ ಎಂದು ಹೇಳಿದರು.

‘ತಮಿಳುನಾಡು, ಆಂಧ್ರ ಮತ್ತು ಕೇರಳದ ಸಂಸದರು ತಮ್ಮ ರಾಜ್ಯಗಳ ಪರ ದನಿ ಎತ್ತುವ ಮೂಲಕ ಅಲ್ಲಿನ ಜನರ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿ­ಯಾ­­ದರು. ಆದರೆ, ನಮ್ಮ ಸಂಸದರು ಕಾವೇರಿ, ಕೃಷ್ಣಾ ಜಲ ವಿವಾದ, ಗಡಿ ವಿವಾದ, ಮಹಾಜನ್‌ ವರದಿ ಅನುಷ್ಠಾನ ಸೇರಿದಂತೆ ಹಲವು ಸಂಗತಿಗಳ ಬಗೆಗೆ ದನಿಯನ್ನೇ ಎತ್ತಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.