ADVERTISEMENT

ಪ್ರತಾಪಸಿಂಹ ವಿರುದ್ಧ ಎಫ್ಐಆರ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಮೈಸೂರು: ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ವಿರುದ್ಧ ಇಲ್ಲಿನ ದೇವರಾಜ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಾಗಿದೆ.

ಸೆಕ್ಟರ್‌ ಮ್ಯಾಜಿಸ್ಟ್ರೇಟ್‌ ಚಂದ್ರ­ಶೇಖರ­ಮೂರ್ತಿ ನೀಡಿದ ದೂರನ್ನು ಆಧರಿಸಿ ಪ್ರಜಾಪ್ರತಿನಿಧಿ ಕಾಯ್ದೆಯ 125ರ ನಿಯಮದ ಅಡಿ ಪ್ರಕರಣ ದಾಖಲಿ­ಸಲಾಗಿದೆ. ನ್ಯಾಯಾಲ­ಯದ ಅನುಮತಿ ಪಡೆದು ಮುಂದುವರಿ­ಯಲಾಗಿದೆ ಎಂದು ದೇವರಾಜ ಠಾಣೆಯ ಇನ್‌ಸ್ಪೆಕ್ಟರ್‌ ಕಾಂತರಾಜು ತಿಳಿಸಿದ್ದಾರೆ.

‘ಪಾಕಿಸ್ತಾನದ ಗಡಿಯಲ್ಲಿ ಭಾರತದ ಇಬ್ಬರು ಯೋಧರ ಶಿರಚ್ಛೇದ­ನ­ವಾ­ದಾಗ ಪ್ರಧಾನಿ ಮನಮೋಹನ ಸಿಂಗ್‌ ಅವರು ಸಣ್ಣ ಪ್ರತಿರೋಧವನ್ನೂ ತೋರ­ಲಿಲ್ಲ. ಇದಕ್ಕೆ ಪ್ರತಿಯಾಗಿ ಪಾಕ್‌ನ ನಾಲ್ವರ ಶಿರಚ್ಛೇದನ ಮಾಡಿ ಎಂದು ನಮ್ಮ ಸೈನಿಕರಿಗೆ ಹೇಳ­ಬಹುದಿತ್ತು. ಭಾರತದಲ್ಲಿರುವ ರಾಜ­ತಾಂತ್ರಿಕ ಕಚೇರಿಯನ್ನು ಧ್ವಂಸ ಮಾಡ­ಬೇಕಾಗಿತ್ತು’ ಎಂದು ಮಾರ್ಚ್‌ 20ರಂದು ನಗರದ ಕೋಟೆ ಆಂಜ­ನೇಯ­ಸ್ವಾಮಿ ದೇವಸ್ಥಾನದ ಆವರಣ­ದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರತಾಪಸಿಂಹ ಹೇಳಿದ್ದರು.

ಇದೇ ಹೇಳಿಕೆಯನ್ನು ನಾಮಪತ್ರ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಆವ­ರಣ­ದಲ್ಲೂ ಪುನರುಚ್ಚರಿಸಿದ್ದರು ಎಂದು ಜಿಲ್ಲಾ ನಗರ ಕಾಂಗ್ರೆಸ್‌ ಸಮಿ­ತಿಯ ಮಾಧ್ಯಮ ಸಂಚಾಲಕ ಎಂ. ಲಕ್ಷ್ಮಣ್‌ ಅವರು ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದರು.

‘ಜಿಲ್ಲಾಧಿ­ಕಾರಿ ಕಚೇರಿ ಎದುರು ಈ ಹೇಳಿಕೆ ನೀಡಿಲ್ಲ ಎಂಬುದು ಪ್ರಾಥಮಿಕ ತನಿಖೆ­ಯಲ್ಲಿ ಪತ್ತೆಯಾಗಿದೆ. ಹೀಗಾಗಿ, ಪ್ರಕರ­ಣ­ವನ್ನು ದೇವರಾಜ ಠಾಣೆಗೆ ವರ್ಗಾ­ಯಿಸಲಾಗಿದೆ’ ಎಂದು ಲಕ್ಷ್ಮೀಪುರಂ ಠಾಣೆಯ ಇನ್‌ಸ್ಪೆಕ್ಟರ್‌ ಸಿದ್ದರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.