ಮದ್ದೂರು: ಇಲ್ಲಿಗೆ ಸಮೀಪದ ಗೆಜ್ಜಲಗೆರೆಯಲ್ಲಿ ಶುಕ್ರವಾರ ನಡೆದ ಯೋಧ ಜಿ.ಎಂ. ಸುಮಂತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಲೋಕಸಭಾ ಚುನಾವಣೆ ಅಭ್ಯರ್ಥಿಗಳು, ರುದ್ರಭೂಮಿಯನ್ನೇ ರಾಜಕೀಯ ಚರ್ಚೆ ಹಾಗೂ ಪ್ರಚಾರದ ಅಖಾಡ ಮಾಡಿಕೊಂಡ ಘಟನೆ ನಡೆಯಿತು.
ಮೊದಲಿಗೆ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅವರು ಶಾಸಕ ಪುಟ್ಟಣ್ಣಯ್ಯ ಅವರನ್ನು ಭೇಟಿ ಮಾಡಿ ಕೈಮುಗಿದು ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು. ಇದರಿಂದ ಅಚ್ಚರಿಗೆ ಒಳಗಾದ ಪುಟ್ಟಣ್ಣಯ್ಯ ಯಾವುದೇ ಪ್ರತಿಕ್ರಿಯೆ ನೀಡದೇ ಮುಗುಳ್ನಕ್ಕು ಪುಟ್ಟರಾಜು ಅವರ ಕೈಕುಲುಕಿ ಸುಮ್ಮನಾದರು.
ಅಲ್ಲಿಯೇ ಇದ್ದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಕೂಡಲೇ ಮುಂದೆ ಬಂದರು. ಶಾಸಕರಾದ ಕೆ.ಎಸ್. ಪುಟ್ಟಣ್ಣಯ್ಯ, ಡಿ.ಸಿ. ತಮ್ಮಣ್ಣ ಸೇರಿದಂತೆ ಅಲ್ಲಿದ್ದ ಎಲ್ಲ ರಾಜಕೀಯ ಮುಖಂಡರನ್ನು ಉದ್ದೇಶಿಸಿ ‘ಈ ಬಾರಿ ಚುನಾವಣೆಯಲ್ಲಿ ಕಿರಿಯವಳಾಗಿ ನಾನೂ ಕೂಡ ಸ್ಪರ್ಧಿಸಿದ್ದೇನೆ. ನೀವೆಲ್ಲರೂ ಬೆಂಬಲ ನೀಡಿ ಗೆಲ್ಲಿಸಬೇಕು’ ಎಂದು ಕೈಮುಗಿದು ಕೋರಿದರು.
ರಮ್ಯಾ ಅವರ ದಿಢೀರ್ ಕೋರಿಕೆ ಕಂಡು ಕೆ.ಎಸ್. ಪುಟ್ಟಣ್ಣಯ್ಯ ಸೇರಿದಂತೆ ಅಲ್ಲಿದ್ದ ಎಲ್ಲ ನಾಯಕರು ಕಿರಿಕಿರಿ ಅನುಭವಿಸಿದರು. ದಿಢೀರ್ ಆದ ಈ ಘಟನೆ ಸುತ್ತಲಿದ್ದ ಜನರಲ್ಲಿ ಅಚ್ಚರಿ ಮೂಡಿಸಿತು. ಯೋಧನ ಸಾವಿನ ಶೋಕದ ನಡುವೆ ರಾಜಕೀಯ ಬಿಡದ ರಾಜಕಾರಣಿಗಳ ವರ್ತನೆ ಕುರಿತು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.