ADVERTISEMENT

ಹಾವೇರಿಯಿಂದ ಚಂಪಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಹಾವೇರಿ: ಹಿರಿಯ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ ಅವರು ಕನ್ನಡ ಪಕ್ಷದಿಂದ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

‘ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಗ್ರಾಮದವನಾದ ನಾನು, ವಿದ್ಯಾಭ್ಯಾಸ, ಸಾಹಿತ್ಯ ಕೃಷಿ ಆರಂಭಿಸಿದ್ದು ತವರು ಜಿಲ್ಲೆಯಿಂದ. ಅದೇ ಕಾರಣಕ್ಕಾಗಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ’ ಎಂದು ಚಂದ್ರಶೇಖರ ಪಾಟೀಲ ಅವರು ತಿಳಿಸಿದ್ದಾರೆ.

ಬೆಂಗಳೂರು ವರದಿ: ‘ರಾಜ್ಯದ ಜನರಿಗೆ ಪ್ರಬಲ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಲೋಕ­ಸಭೆಯಲ್ಲಿ ಕನ್ನಡದ ಕುರಿತು ಮಾತನಾಡಲು ಒಂದು ಪ್ರಬಲವಾದ ಧ್ವನಿಯು ಬೇಕಾಗಿದೆ’ ಎಂದು ‘ಕನ್ನಡ ಪಕ್ಷ– ಕರ್ನಾಟಕ’ದ ಅಧ್ಯಕ್ಷ ಪಿ.ಪುರುಷೋತ್ತಮ್‌ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡಕ್ಕೆ ರಾಜಕೀಯ ಶಕ್ತಿಯಿಲ್ಲದಿರುವುದರಿಂದ ರಾಜ್ಯಕ್ಕೆ ಎಲ್ಲ ನೆಲೆಗಳಲ್ಲಿ ನಿರಂತರ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಪಕ್ಷವು ಲೋಕಸಭಾ ಚುನಾವಣೆಯ ಕಣಕ್ಕಿಳಿಯಲು ನಿರ್ಧರಿಸಿದೆ’ ಎಂದರು.

‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಇಂದು ಅನಿವಾರ್ಯವಾಗಿವೆ. ಬಲಿಷ್ಠ ಕೇಂದ್ರ ಸರ್ಕಾರ ಮತ್ತು ದುರ್ಬಲ ರಾಜ್ಯ ಸರ್ಕಾರದಿಂದ ಪ್ರಾದೇಶಿಕ ಸಮಸ್ಯೆಗಳಿಗೆ ಪರಿಹಾರವಿಲ್ಲ. ಇದರಿಂದ ರಾಜ್ಯದ ಜನರಿಗೆ ಪ್ರಬಲವಾದ ರಾಜಕೀಯ ಪಕ್ಷದ ಅಗತ್ಯವಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.