ಮಳವಳ್ಳಿ: ‘ಕಾಂಗ್ರೆಸ್ನ ಕೆಲವು ಮಹಿಳೆಯರು ನನ್ನ ವಿರುದ್ಧ ಗೋ ಬ್ಯಾಕ್ ಎನ್ನುತ್ತಿದ್ದಾರೆ. ಆದರೆ ಮಂಡ್ಯ ಕ್ಷೇತ್ರದ ಜನ ಮಾತ್ರ ಕಂ ಬ್ಯಾಕ್ ಎನ್ನುತ್ತಾ ಸ್ವಾಗತ ಕೋರುತ್ತಿದ್ದಾರೆ’ ಎಂದು ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಹೇಳಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿ, ‘ತಾಯಂದಿರು ಗ್ಯಾರಂಟಿ ಯೋಜನೆಗಳಿಗೆ ಮೋಸ ಹೋಗಬೇಡಿ ಎಂದಷ್ಟೇ ನಾನು ತುಮಕೂರಿನಲ್ಲಿ ಹೇಳಲು ಹೊರಟಿದ್ದೆ. ಆದರೆ ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮಂಡ್ಯ ಜನ ನನ್ನ ಮನದಾಳ ಅರ್ಥ ಮಾಡಿಕೊಂಡಿದ್ದಾರೆ’ ಎಂದರು.
‘ತುಮಕೂರಿನಲ್ಲಿ ಮಾತನಾಡುವಾಗ ನಾನು ಮಹಿಳೆ ಎನ್ನುವ ಪದ ಬಳಸಿಯೇ ಇಲ್ಲ, ತಾಯಂದಿರು ಎಂದಿದ್ದೇನೆ. ಕಾಂಗ್ರೆಸ್ನವರು ನನ್ನ ಮೇಲೆ ಗೂಬೆ ಕೂರಿಸಲೆತ್ನಿಸುತ್ತಿದ್ದಾರೆ. ನನಗೆ ಆದ ಶಸ್ತ್ರಚಿಕಿತ್ಸೆ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಾರೆ, ಈಗಿನ ತಂತ್ರಜ್ಞಾನದಲ್ಲಿ ಕೇವಲ 28 ನಿಮಿಷದಲ್ಲಿ ನನಗೆ ಶಸ್ತ್ರಚಿಕಿತ್ಸೆಯಾಗಿದೆ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ನನ್ನ ತೆರಿಗೆ, ನನ್ನ ಹಕ್ಕು ಎನ್ನುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗ ನನ್ನ ಸೀಟು ನನ್ನ ಹಕ್ಕು ಎನ್ನಲು ಸಿದ್ಧವಾಗಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಲು ಗುದ್ದಲಿಪೂಜೆ ನೆರವೇರಿಸಿದ್ದಾರೆ’ ಎಂದರು.
‘ಅಧಿಕಾರಕ್ಕೆ ಬಂದು 10 ತಿಂಗಳಾದರೂ ಸರ್ಕಾರ ರೈತರ ಸಂಕಷ್ಟ ಕೇಳಿಲ್ಲ. ಸುಪ್ರೀಂ ಕೋರ್ಟ್ ಆದೇಶದ ನೆಪ ಹೇಳಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದೀರಲ್ಲ, ಎಲ್ಲಿಗೆ ಹೋಗಿತ್ತು ನಿಮ್ಮ ತಾಕತ್ತು? ನೀರು ಬಿಟ್ಟು ರೈತರಿಗೆ ಅನ್ಯಾಯ ಮಾಡಿದ್ದೀರಲ್ಲ, ಎಲ್ಲಿಗೆ ಹೋಗಿತ್ತು ನಿಮ್ಮ ಗಂಡಸ್ತನ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.