ಮಂಡ್ಯ: ಹಲವಾರು ಪ್ರವಾಸಿ ತಾಣಗಳಿಂದ ಖ್ಯಾತಿ ಹೊಂದಿರುವ ಮಂಡ್ಯ ಜಿಲ್ಲೆಯು ರಾಜಕೀಯವಾಗಿಯೂ ಅಷ್ಟೇ ಸುದ್ದಿ ಮಾಡಿದೆ. ಘಟಾನುಘಟಿ ರಾಜಕೀಯ ನಾಯಕರು ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಅಂತಹ ಪ್ರಭಾವಿ ನಾಯಕರದಲ್ಲಿ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಸತತ ನಾಲ್ಕು ಗೆಲುವು ಪಡೆಯುವ ಮೂಲಕ ಸೋಲಿಲ್ಲದ ಸರ್ದಾರ ಎನಿಸಿಕೊಂಡಿದ್ದವರು ಎಂ.ಕೆ. ಶಿವನಂಜಪ್ಪ.
ಸ್ವಾತಂತ್ರ್ಯ ನಂತರ 1952ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಸರಳ, ಶಿವಭಕ್ತರೂ ಆಗಿದ್ದ ಶಿವನಂಜಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ. ಮಂಡ್ಯದ ಕಾಳನಾಯಕನ ಕೆಂಪೇಗೌಡರ ಪುತ್ರರಾದ ಅವರು, ಹಳ್ಳಿಯಲ್ಲಿ ನ್ಯಾಯ ಪಂಚಾಯಿತಿ ಮಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದರು.
ಶಿವನಂಜಪ್ಪ ಅವರ ಎದುರಾಳಿಯಾಗಿ ರಾಜ್ಯದಲ್ಲಿ ಪ್ರಬಲವಾಗಿದ್ದ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯಿಂದ ಎಂ.ಸಿ. ಲಿಂಗೇಗೌಡ ಸ್ಪರ್ಧೆಗೆ ಇಳಿದಿದ್ದರು. 1947ರಿಂದ 52ರವರೆಗಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ, ಉಪ ಸಭಾಪತಿಗಳಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.
ಚುನಾವಣೆ ಎಂದರೆ ಸಾಕು ಹತ್ತಾರು ಮಂದಿ ಪೈಪೋಟಿಗೆ ಬಿದ್ದು ಸ್ಪರ್ಧಿಸುತ್ತಾರೆ. ಆದರೆ, ಮಂಡ್ಯದ ಮೊದಲ ಲೋಕಸಭಾ ಚುನಾವಣೆಗೆ ಇಬ್ಬರೇ ಅಭ್ಯರ್ಥಿಗಳು ಸ್ಪರ್ಧಿಸಿದ್ದು ವಿಶೇಷವಾಗಿತ್ತು. ನೇರಾನೇರ ಹಣಾಹಣಿ ನಡೆಯಿತು.
ಕೇವಲ 3,60,464 ಮತದಾರರನ್ನು ಹೊಂದಿದ್ದ ಮಂಡ್ಯ ಕ್ಷೇತ್ರದಲ್ಲಿ 2,12,015 ಮಂದಿ ಮತ ಚಲಾಯಿಸಿದರು. ಶೇ 58.82 ಮತದಾನವಾಗಿತ್ತು. ಶಿವನಂಜಪ್ಪ ಅವರು 39,117 ಮತಗಳ ಅಂತರದಿಂದ ಜಯ ಸಾಧಿಸುವ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದ ಮೊದಲ ಸಂಸದ ಎಂಬ ಕೀರ್ತಿಗೆ ಭಾಜನರಾದರು.
ಅಭ್ಯರ್ಥಿ ಹೆಸರು ಪಕ್ಷ ಪಡೆದ ಮತ
4ಎಂ.ಕೆ. ಶಿವನಂಜಪ್ಪ ಕಾಂಗ್ರೆಸ್ 1,25,566 (ವಿಜೇತ)
4ಎಂ.ಸಿ. ಲಿಂಗೇಗೌಡ ಕೆಎಂಪಿಪಿ 86,449
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.