ಲಖನೌ: ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಬಿಎಸ್ಪಿ ನಾಯಕಿ ಮಾಯಾವತಿ ಅವರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಿಷಾದ್ ಪಕ್ಷ ಆರೋಪಿಸಿದೆ.
ನಿಷಾದ್ ಪಕ್ಷವು ಇತ್ತೀಚೆಗಷ್ಟೇ ಎಸ್ಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಬಿಜೆಪಿ ಜೊತೆ ಸೇರಿಕೊಂಡಿದೆ.
‘ಸೀಟು ಹಂಚಿಕೆಗೆ ಸಂಬಂಧಿಸಿದಂತೆ ನಾವು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದೇವೆ. ನಾವು ನಿರೀಕ್ಷಿಸಿದಷ್ಟು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸವಿದೆ. ನಾವು ನಮ್ಮ ಪಕ್ಷದ ಚಿಹ್ನೆ ಅಡಿಯಲ್ಲೇ ಚುನಾವಣೆ ಎದುರಿಸಲು ಇಚ್ಛಿಸುತ್ತೇವೆ. ಅಮಿತ್ ಶಾ ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ’ ಎಂದು ಪಕ್ಷದ ಅಧ್ಯಕ್ಷ ಸಂಜಯ್ ನಿಷಾದ್ ಹೇಳಿದ್ದಾರೆ.
‘ಗೋರಖ್ಪುರ ಹಾಗೂ ಮಹಾರಾಜ್ಗಂಜ್ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡುವುದಾಗಿ ಅಖಿಲೇಶ್ ಭರವಸೆ ಕೊಟ್ಟಿದ್ದರು. ಆದರೆ ನಂತರ ನಮಗೆ ಒಂದು ಕ್ಷೇತ್ರವನ್ನು ಮಾತ್ರ ಬಿಟ್ಟುಕೊಟ್ಟು ಎಸ್ಪಿ ಚಿಹ್ನೆಯಲ್ಲಿಯೇ ಸ್ಪರ್ಧಿಸುವಂತೆ ಸೂಚಿಸಿದ್ದರು. ಮಾಯಾವತಿ ಅವರ ಸೂಚನೆ ಪಾಲಿಸುವ ಅಖಿಲೇಶ್ ನಮಗೆ ಮೋಸ ಮಾಡಿದ್ದಾರೆ. ನಾವು ನಮ್ಮ ಪಕ್ಷದ ಚಿಹ್ನೆಯ ಅಡಿಯಲ್ಲೇ ಸ್ಪರ್ಧಿಸಲು ಇಚ್ಛಿಸುತ್ತೇವೆ. ಆ ಕಾರಣಕ್ಕೆ ಮೈತ್ರಿಯಿಂದ ಹೊರಬರಲು ನಿರ್ಧರಿಸಿದೆವು’ ಎಂದು ಸಂಜಯ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.