ನವದೆಹಲಿ: ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಕಳೆದ ವರ್ಷದ ಮಾರ್ಚ್ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಸಲ್ಲಿಸಲಾದ ಅಫಿಡವಿಡ್ (ಹೇಳಿಕೆ)ನಲ್ಲಿ ಆಸ್ತಿಪಾಸ್ತಿ ಕುರಿತು ಸಂಪೂರ್ಣ ಮಾಹಿತಿ ನೀಡಿಲ್ಲ ಎಂದು ದೂರಿ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಬೆಂಗಳೂರಿನ ರಂಜಿತ್ ಥಾಮಸ್ ಮಂಗಳವಾರ ಈ ಅರ್ಜಿ ಸಲ್ಲಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಅರ್ಜಿಯ ವಿಚಾರಣೆ ಮುಂದಿನ ಸೋಮವಾರ ನಡೆಯುವ ಸಾಧ್ಯತೆ ಇದೆ.
ಚುನಾವಣೆ ವೇಳೆ ಸಲ್ಲಿಸಲಾದ ಹೇಳಿಕೆಯಲ್ಲಿ ತಮ್ಮ ಲ್ಯಾಂಡ್ ರೋವರ್ ಕಾರ್ ಬಗ್ಗೆ ಮಾಹಿತಿ ನೀಡಿಲ್ಲ. ವೆಕ್ಟ್ರಾ ಕನ್ಸಲ್ಟನ್ಸಿ ಸರ್ವೀಸ್ ಪ್ರೈ ಲಿ. ಸಂಸ್ಥೆಯಲ್ಲಿ ತಮ್ಮ ಪತ್ನಿ ಅಂಜು ಅವರ ಹೆಸರಿನಲ್ಲಿ ಹೂಡಿಕೆ ಮಾಡಿರುವ ಷೇರುಗಳು, ಬೆಂಗಳೂರಿನ ಕೋರಮಂಗಲದ ಬಳಿ ಹೊಂದಿರುವ ಐಷಾರಾಮಿ ಬಂಗಲೆಗಳ ವಿವರಗಳಿಲ್ಲ ಎಂದು ದೂರಲಾಗಿದೆ.
ಸಾಂವಿಧಾನಿಕ ಅಧಿಕಾರವನ್ನು ಬಳಸುವ ಮೂಲಕ ಚುನಾವಣಾ ಆಯೋಗವು ಈ ಕುರಿತ ತನಿಖೆ ಕೈಗೊಳ್ಳುವಂತೆ ವಕೀಲರಾದ ಅವನಿ ಬನ್ಸಲ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.