ಹಾಸನ: ಓವೈಸಿ ಪಕ್ಷದ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ವಿಚಾರವಾಗಿ ನಾನು ಖಚಿತ ಅಭಿಪ್ರಾಯಕ್ಕೆ ಬಂದಿಲ್ಲ. ಬಿಎಸ್ಪಿ, ಸಿಪಿಐಎಂ, ಎನ್ಸಿಪಿ ಜೊತೆ ಈಗಾಗಲೇ ಹೊಂದಾಣಿಕೆ ಮಾಡಿ ಕೊಳ್ಳಲಾಗಿದೆ. ಮುಂದೆ ಯಾವುದೆ ಕಾರಣಕ್ಕೂ ಬಿಜೆಪಿ ಜೊತೆ ಹೋಗಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಎಸ್ಪಿ ಜೊತೆ ಇರುತ್ತೇನೆ. ನನ್ನ ಜೀವನದ ಹೋರಾಟದ ಫಲ, ಈ ಸಾರಿ ಸರಕಾರ ರಚನೆ ಮಾಡಿಯೇ ತೀರುವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಹಂನಿಂದ ಹೀಗೆ ಹೇಳುತ್ತಿಲ್ಲ. ದೈವದ ಪರೀಕ್ಷೆ ಇದೆ. ಪ್ರಾದೇಶಿಕ ಪಕ್ಷ ಗಟ್ಟಿಯಾಗಬೇಕು. ನನ್ನ ಮಗನನ್ನು ಸಿಎಂ ಮಾಡೋದಷ್ಟೇ ನನ್ನ ಉದ್ದೇಶ ಅಲ್ಲ ಎಂದರು.
ಕಮೀಷನ್ ಆರೋಪ ಪ್ರತ್ಯಾರೋಪ ವಿಚಾರವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಇಷ್ಡು ದೂರ ಹೋಗಲೇ ಬಾರದಿತ್ತು. ನಾನು ಯಾರ ಬಗ್ಗೆಯೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ನಾವು ಅಭ್ಯರ್ಥಿ ಹಾಕುತ್ತೇವೆ. ಸೋಲು ಗೆಲುವು ಬೇರೆ. ಬೆಂಬಲ ಕೊಡಿ ಎಂದು ಯಾರ ಜೊತೆಯೂ ಮಾತನಾಡಲು ಹೋಗಿಲ್ಲ ಎಂದರು.
ಚಿದಂಬರಂ ಪುತ್ರನ ಬಂಧನ ಬಗ್ಗೆ ನಾನು ಮಾತನಾಡಲ್ಲ. ಕಾವೇರಿಗಾಗಿ 1964ರಿಂದ ಹೋರಾಟ ಮಾಡಿದ್ದೇನೆ. ಮುಂದೆಯೂ ಮಾಡುವೆ. ರಾಜ್ಯ ಸರ್ಕಾರ ಏನು ಮಾಡುತ್ತೋ ನನಗೆ ಗೊತ್ತಿಲ್ಲ. ನಾನು ಲೋಕಸಭೆಯಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ನಮಗೆ ನೀರು ಉಳೀಬೇಕು, ನನ್ನ ಜನ ಉಳಿಸಬೇಕು. ಮಾಲೀಕಯ್ಯ ಗುತ್ತೇದಾರ್ ನನ್ನ ಸ್ನೇಹಿತ ಎಂದ ದೇವೇಗೌಡ ಅವರು, ಜೆಡಿಎಸ್ ಸೇರ್ಪಡೆ ಬಗ್ಗೆ ಗುಟ್ಟು ಬಿಟ್ಟು ಕೊಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.