ಬೆಂಗಳೂರು: ಬಿಜೆಪಿ ಆಮಿಷಗಳಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ರೆಸಾರ್ಟ್, ಹೋಟೆಲ್ ಮೊರೆ ಹೋಗಿದ್ದಾರೆ. ಗುರುವಾರ ತಡರಾತ್ರಿ ಕೊಚ್ಚಿಗೆ ಹೋಗುವುದಾಗಿ ಸುದ್ದಿ ಹರಿಬಿಟ್ಟಿದ್ದ ಮುಖಂಡರು ಹೆದ್ದಾರಿಯಲ್ಲಿ ಬಸ್ ಬದಲಾಯಿಸಿ ಹೈದರಾಬಾದ್ಗೆ ತೆರಳಿದ್ದರು.
ಈ ರೀತಿ ತಮ್ಮ ಶಾಸಕರನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯಲು ಕಾಂಗ್ರೆಸ್ ಬಳಸಿದ್ದು ಶರ್ಮಾ ಟ್ರಾನ್ಸ್ ಪೋರ್ಟ್.
ಶರ್ಮಾ ಬಸ್ ಯಾಕೆ?
ಕಾಂಗ್ರೆಸ್ ಪಕ್ಷದವರಾಗಿದ್ದ ದಿವಂಗತ ಧನರಾಜ್ ಪರಸ್ಮಲ್ ಶರ್ಮಾ ಅವರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಈ ಶರ್ಮಾ ಟ್ರಾನ್ಸ್ ಪೋರ್ಟ್. ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಈ ಬಸ್ ಸೇವೆ ಕಲ್ಪಿಸುತ್ತಿದೆ.
ಟ್ರಾವೆಲ್ ಏಜೆನ್ಸಿಯ ವೆಬ್ಸೈಟ್ ಪ್ರಕಾರ ಡಿಪಿ ಶರ್ಮಾ ಅವರು ಬೆಂಗಳೂರು ಟರ್ಫ್ ಕ್ಲಬ್ನ ಪ್ರಧಾನಾಧಿಕಾರಿಯಾಗಿದ್ದರು. 1960ರಲ್ಲಿಯೇ ಶರ್ಮಾ ಅವರು ಸಾರಿಗೆ ಸಂಪರ್ಕ ಸೇವೆಯನ್ನು ಆರಂಭಿಸಿದ್ದರು. ನ್ಯೂಸ್ 18 ಸುದ್ದಿ ಮಾಧ್ಯಮದ ವರದಿ ಪ್ರಕಾರ ಡಿಪಿ ಶರ್ಮಾ ಅವರು ರಾಜಸ್ಥಾನದವರಾಗಿದ್ದು, 1980ರಲ್ಲಿ ಕಾಂಗ್ರೆಸ್ನಲ್ಲಿ ಸಕ್ರಿಯರಾಗಿದ್ದರು. ಈ ಹೊತ್ತಿನಲ್ಲಿಯೇ ಅವರು ರಾಜ್ಯದಾದ್ಯಂತ ಐಷಾರಾಮಿ ಬಸ್ ಸೇವೆ ಆರಂಭಿಸಿದ್ದರು.
1980ರಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಗೆಲುವು ಕಾಣಲಿಲ್ಲ. 1980ರಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಿ ಶರ್ಮಾ ಅವರಿಗೆ ಜೆಎನ್ಪಿ ಅಭ್ಯರ್ಥಿ ಟಿ. ಆರ್ ಶ್ಯಾಮಣ್ಣ ತೀವ್ರ ಪೈಪೋಟಿ ಒಡ್ಡಿದ್ದರು. 1998ರಲ್ಲಿ ಬಿಜೆಪಿಯ ಅನಂತ ಕುಮಾರ್, ಶರ್ಮಾ ಅವರನ್ನು 1.8ಲಕ್ಷ ಮತದಿಂದ ಪರಾಭವಗೊಳಿಸಿದ್ದರು.
2001ರಲ್ಲಿ ಡಿಪಿ ಶರ್ಮ ತೀರಿಕೊಂಡ ನಂತರ ಅವರ ಮಗ ಸುರೇಶ್ ಶರ್ಮಾ ಈ ಸಂಸ್ಥೆಯ ಹೊಣೆ ವಹಿಸಿದ್ದಾರೆ. ಸುರೇಶ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಆಗಿದ್ದರು. ಕ್ಯಾಚ್ ನ್ಯೂಸ್ ಪ್ರಕಾರ ಮಾಜಿ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಈ ಸಾರಿಗೆ ಸಂಸ್ಥೆಯಲ್ಲಿ ಬೇನಾಮಿ ಪಾಲುದಾರರಾಗಿದ್ದಾರೆ. 2016ರಲ್ಲಿ ಸುರೇಶ್ ಮರಣ ನಂತರ ಅವರ ತಮ್ಮ ಸುನೀಲ್ ಕುಮಾರ್ ಶರ್ಮಾ ಅವರು ಸಂಸ್ಥೆಯ ಜವಾಬ್ದಾರಿ ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.