ಮಂಡ್ಯ: ಕಾಂಗ್ರೆಸ್– ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡಿದ ಮಾತ್ರಕ್ಕೆ ಹಳೆಯದನ್ನು ಮರೆಯುವುದಿಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಸ್ನೇಹ ಬೇಕಾಗಿಲ್ಲ ಎಂದು ನಾಗಮಂಗಲ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಹೇಳಿದರು.
‘ಜೆಡಿಎಸ್ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಏಳು ಮುಖಂಡರಲ್ಲಿ ನಾಲ್ವರು ಸೋತಿದ್ದೇವೆ. ಜೆಡಿಎಸ್ ತ್ಯಜಿಸದಿದ್ದರೆ ಚುನಾವಣೆಯಲ್ಲಿ ಗೆದ್ದು ಈಗಿನ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಬಹುದಿತ್ತು ಎಂಬ ಭಾವನೆ ನಮಗಿಲ್ಲ. ಸಮ್ಮಿಶ್ರ ಸರ್ಕಾರವನ್ನು ಗೌರವಿಸುತ್ತೇವೆ. ವೈಯಕ್ತಿಕವಾಗಿ ವಿರೋಧವಿದ್ದರೂ ಕಾಂಗ್ರೆಸ್ ಕಾರ್ಯಕರ್ತರಾಗಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಶಾಸಕ ಜಮೀರ್ ಅಹ್ಮದ್ ಕೂಡ ವೈಯಕ್ತಿಕವಾಗಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿಲ್ಲ. ಆದರೆ, ಪಕ್ಷದ ನಿರ್ಧಾರ
ದಂತೆ ನಡೆದುಕೊಂಡಿದ್ದಾರೆ. ಮತ್ತೆ ಜೆಡಿಎಸ್ ಜೊತೆ ಸಂಬಂಧ ಬೆಸೆಯುವುದಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್, ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಶೇ 70ರಷ್ಟು ಕಾಂಗ್ರೆಸ್ ಸಚಿವರು ಇರುತ್ತಾರೆ. ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.