ಕೆ.ಆರ್.ನಗರ (ಮೈಸೂರು ಜಿಲ್ಲೆ): ಜಿ.ಟಿ.ದೇವೇಗೌಡ ಅವರ ಖಾತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಪುನರ್ ವಿಮರ್ಶೆ ಮಾಡಬೇಕು. ರೈತ, ಭೂ ಅಥವಾ ಸಾರ್ವಜನಿಕ ಸಂಬಂಧಿತ ಇಲಾಖೆ ಕೊಡುವುದು ಒಳ್ಳೆಯದು ಎಂದು ಶಾಸಕ ಎಚ್.ವಿಶ್ವನಾಥ್ ಹೇಳಿದರು.
ನನಗೆ ಮಂತ್ರಿ ಸ್ಥಾನ ಸಿಗಲಿಲ್ಲ, ನನಗೆ ಇಷ್ಟ ಇರುವ ಖಾತೆ ಕೊಡಲಿಲ್ಲ ಎಂದು ದೊಡ್ಡದಾಗಿ ಬಿಂಬಿಸಿಕೊಂಡರೆ ನಾಡಿನ ಜನತೆಯ ಮನಸ್ಸಿಗೆ ನೋವಾಗುತ್ತದೆ, ಹಾಗಾಗಿ ಶಾಸಕರು ಅದನ್ನೆಲ್ಲ ಮೀರಿ ನಿಲ್ಲಬೇಕಾಗುತ್ತದೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ಸಂದರ್ಭದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಬಾದಾಮಿಗೆ ಹೋಗಬಾರದಿತ್ತು. ಅವರೇ ಹೋದರೆ ಇಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವವರು ಯಾರು ಎಂದು ಪ್ರಶ್ನಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಕುರುಬ ಸಮಾಜ ಶೇ 80ರಷ್ಟು ಕಾಂಗ್ರೆಸ್ಗೆ ಮತ ನೀಡಿದೆ. ಆದರೆ, ಕಾಂಗ್ರೆಸ್ ತನ್ನ ಮಂತ್ರಿಮಂಡಲದಲ್ಲಿ ಕುರುಬ ಸಮಾಜದ ಒಬ್ಬರಿಗೂ ಅವಕಾಶ ನೀಡಿಲ್ಲ. ಇದು ಖಂಡನೀಯ. ಇದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಹೈಕಮಾಂಡ್ನ ನಿರ್ಲಕ್ಷ್ಯ, ವೈಫಲ್ಯವಾಗಿದೆ. ಸಿದ್ದರಾಮಯ್ಯ ಅವರು ತಕ್ಷಣ ಗಮನ ಹರಿಸಿ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಕುರುಬ ಸಮಾಜದ ಇಬ್ಬರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.