ADVERTISEMENT

ಗಾಲ್ಫ್ ಶೈರ್‌ನಲ್ಲಿ ಜೆಡಿಎಸ್‌ ಶಾಸಕರು

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಮುಖ್ಯ ದ್ವಾರದಲ್ಲಿ ತಪಾಸಣೆ ನಡೆಸಿದ ಭದ್ರತಾ ಸಿಬ್ಬಂದಿ
ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಮುಖ್ಯ ದ್ವಾರದಲ್ಲಿ ತಪಾಸಣೆ ನಡೆಸಿದ ಭದ್ರತಾ ಸಿಬ್ಬಂದಿ   

ದೇವನಹಳ್ಳಿ: ‘ಆಪರೇಷನ್ ಕಮಲ’ದ ಸಾಧ್ಯತೆಗೆ ಒಳಗಾಗದಿರುವಂತೆ ನೋಡಿಕೊಳ್ಳಲು ಜೆಡಿಎಸ್ ತನ್ನ ಶಾಸಕರನ್ನು ಇಲ್ಲಿನ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿ ಇರಿಸಿದೆ.

34 ಶಾಸಕರು ಇಲ್ಲಿ ವಾಸ್ತವ್ಯ ಹೂಡಿದ್ದು, ಸೋಮವಾರ ಬೆಳಿಗ್ಗೆ 10.30ಕ್ಕೆ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ, ಹಾಸನ ಜಿಲ್ಲೆಯಲ್ಲಿನ ಕೆಲವು ದೇವಾಲಯಗಳಿಗೆ ತೆರಳಿದ ಕಾರಣ ಅವರು ಬರಲಿಲ್ಲ ಎಂದು ಮುಖಂಡರೊಬ್ಬರು ತಿಳಿಸಿದರು.

ರೆಸಾರ್ಟ್ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿರಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಅವರು, ‘ಭಾನುವಾರ ರಾತ್ರಿ ಶಿರಾ ನಗರ ವ್ಯಾಪ್ತಿಯಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಜ್ಯೋತಿನಗರ ಮತ್ತು ಪಟ್ಟನಾಯಕನಹಳ್ಳಿ ಗ್ರಾಮದ 8 ಮಂದಿ ದುರ್ಮರಣ ಹೊಂದಿದ್ದಾರೆ. ಆದ್ದರಿಂದ, ಪಕ್ಷದ ವರಿಷ್ಠರ ಅನುಮತಿ ಮೇರೆಗೆ ಮೃತ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದೇನೆ. ರಾತ್ರಿ ಮತ್ತೆ ರೆಸಾರ್ಟ್‌ಗೆ ವಾಪಸ್ ಬರುವೆ’ ಎಂದು ತಿಳಿಸಿದರು.

ADVERTISEMENT

‘ರೆಸಾರ್ಟ್‌ನಲ್ಲಿ ಮುಕ್ತ ವಾತಾವರಣವಿದೆ. ಕುಟುಂಬದ ಸದಸ್ಯರು ಬರಲು ಅವಕಾಶ ಕಲ್ಪಿಸಲಾಗಿದೆ. ಬಹುಮತ ಸಾಬೀತು ಪಡಿಸುವವರೆಗೂ ಇಲ್ಲೇ ಇರಲು ವ್ಯವಸ್ಥೆ ಮಾಡಲಾಗಿದೆ’ ಎಂದರು. ಮಧ್ಯಾಹ್ನದ ನಂತರ ಶಾಸಕ ಬಂಡೆಪ್ಪ ಕಾಶೆಂಪೂರ, ಬಿಎಸ್‌ಪಿ ಶಾಸಕ ಮಹೇಶ್ ರೆಸಾರ್ಟ್‌ಗೆ ಬಂದು ಸೇರಿಕೊಂಡರು.

ಐಷಾರಾಮಿ ರೆಸಾರ್ಟ್: 400 ಎಕರೆ ವಿಸ್ತೀರ್ಣದಲ್ಲಿ ಈ ರೆಸಾರ್ಟ್ ಇದೆ. ಒಳಾಂಗಣದ ಕ್ಲಬ್‌ ಹೌಸ್‌ನಲ್ಲಿ ಸಾಮೂಹಿಕ ಉಪಾಹಾರ ಗೃಹ, ಊಟದ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.