ಉಡುಪಿ: ಕರ್ನಾಟಕ ಜನಶಕ್ತಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಸ್ವಯಂ ನಿವೃತ್ತಿ ಪಡೆದಿರುವ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ಕಾಪು ಕ್ಷೇತ್ರದ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದರು. ಸಹೋದರ ಅಚ್ಯುತ ಮಾತ್ರ ಅವರೊಂದಿಗೆ ಇದ್ದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಚುನಾವಣಾ ಆಯೋಗ ‘ಬೆಂಡೆಕಾಯಿ’ ಗುರುತನ್ನು ಪಕ್ಷಕ್ಕೆ ನೀಡಿದೆ. ಆದರೆ, ಅದೇ ಗುರುತು ಮುಂದುವರಿಯಬೇಕಾದರೆ ಶೇ 5 ರಷ್ಟು ಅಭ್ಯರ್ಥಿಗಳು ಸ್ಪರ್ಧಿಸಬೇಕು ಎಂಬ ಷರತ್ತನ್ನು ವಿಧಿಸಿದೆ. ಈಗಾಗಲೇ ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 15 ಮಂದಿಗೆ ಈಗಾಗಲೇ ಟಿಕೆಟ್ ನೀಡಲಾಗಿದೆ. ಅವರೂ ನಾಮಪತ್ರ ಸಲ್ಲಿಸಲಿದ್ದಾರೆ’ ಎಂದರು.
‘ರಾಜಕೀಯ ಪಕ್ಷ ಆರಂಭಿಸಿರುವುದರಿಂದ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಇದೊಂದು ಒಳ್ಳೆಯ ಅನುಭವ. ಮುಂದಿನ ಚುನಾವಣೆಯ ವೇಳೆ ಪಕ್ಷವನ್ನು ಇನ್ನಷ್ಟು ಬಲಪಡಿಸಲಾಗುವುದು. ಈ ಬಾರಿ ಪರಾಜಯಗೊಳ್ಳುವ ಅಭ್ಯರ್ಥಿಗಳು ಅವರ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಿ ಜನರ ವಿಶ್ವಾಸ ಗಳಿಸಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ವೇಳೆ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ’ ಎಂದರು.
ಆಸ್ತಿ ವಿವರ
ಚರಾಸ್ತಿ ಮೌಲ್ಯ ₹12,09,614
2017– 18ರ ಆದಾಯ ₹83,510
ಚಿನ್ನಭಾರಣದ ಮೌಲ್ಯ ₹7,00,000
ಕೆನರಾ ಬ್ಯಾಂಕ್ ಖಾತೆಯಲ್ಲಿ ₹2,83,551
ಎಸ್ಬಿಐ ₹86,063
ಎಲ್ಐಸಿ ₹1,00,000
ಶೈಕ್ಷಣಿಕ ಅರ್ಹತೆ: ಎಂಎ, ಎಂಎಸ್ಡಬ್ಲ್ಯು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.