ADVERTISEMENT

ತೃತೀಯ ರಂಗದ ಪಕ್ಷಗಳು ಕೇವಲ ಅಣಬೆಗಳು: ಶ್ರೀರಾಮುಲು ಲೇವಡಿ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:30 IST
Last Updated 24 ಮೇ 2018, 19:30 IST
ತೃತೀಯ ರಂಗದ ಪಕ್ಷಗಳು ಕೇವಲ ಅಣಬೆಗಳು: ಶ್ರೀರಾಮುಲು ಲೇವಡಿ
ತೃತೀಯ ರಂಗದ ಪಕ್ಷಗಳು ಕೇವಲ ಅಣಬೆಗಳು: ಶ್ರೀರಾಮುಲು ಲೇವಡಿ   

ಬಳ್ಳಾರಿ: ‘ಚುನಾವಣೆ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ತೃತೀಯ ರಂಗದ ಪಕ್ಷಗಳು ಅಣಬೆಗಳಂತೆ. ಹೆಚ್ಚು ಕಾಲ ಬಾಳುವುದಿಲ್ಲ. ಚುನಾವಣೆ ಮುಗಿದ ಕೂಡಲೇ ದಿಕ್ಕಾಪಾಲಾಗುತ್ತವೆ’ ಎಂದು ಶಾಸಕ ಬಿ.ಶ್ರೀರಾಮುಲು ಲೇವಡಿ ಮಾಡಿದರು.

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಕಾಂಗ್ರೆಸ್‌ ಪಕ್ಷ ಏಕೆ ಬೀಗುತ್ತಿತ್ತು ಎಂದೇ ತಿಳಿಯುತ್ತಿಲ್ಲ. ಏಕೆಂದರೆ ಅದು ಜೊತೆ ಸೇರಿಸಿಕೊಂಡಿರುವ ತೃತೀಯ ರಂಗ, ಸದಾ ಕಾಲ ಕಾಂಗ್ರೆಸ್‌ ವಿರುದ್ಧವೇ ಹೋರಾಟ ಮಾಡುತ್ತಾ ಬೆಳೆದಿದೆ’ ಎಂದು ನಗರದ ತಮ್ಮ ಮನೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ತೃತೀಯ ರಂಗದಲ್ಲಿ ಕಾಂಗ್ರೆಸ್‌ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇವರೆಲ್ಲರೂ, ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಮಣಿಸಬೇಕೆಂದುಕೊಂಡಿದ್ದಾರೆ. ಆದರೆ ಅದು ಆಗದು’ ಎಂದರು.

ADVERTISEMENT

‘ತೃತೀಯ ರಂಗದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಇಲ್ಲ. ಅದೇನಿದ್ದರೂ ಪ್ರಾದೇಶಿಕಕ್ಕೆ ಮಾತ್ರ ಸೀಮಿತ. ಈ ರಂಗದ ಪಕ್ಷಗಳಿಗೆ ಬದ್ಧತೆ ಇಲ್ಲ. ಅಲ್ಲಿರುವ ಮುಖಂಡ
ರೆಲ್ಲರೂ ಮೋದಿಯವರಿಂದ ಸೋತು ಸುಣ್ಣವಾದವರು’ ಎಂದು ವ್ಯಂಗ್ಯವಾಡಿದರು.

‘ಜೆಡಿಎಸ್‌ಗೆ ಬಹುಮತ ದೊರೆತಿಲ್ಲ, ಹೀಗಾಗಿ ರೈತರ ಸಾಲ ಮನ್ನಾ ಅಸಾಧ್ಯ ಎಂದು ಕುಮಾರಸ್ವಾಮಿ ಹೇಳಿರುವುದು ಸರಿಯಲ್ಲ. ಮುಖ್ಯಮಂತ್ರಿಯಾದ ಬಳಿಕ ಬಹುಮತದ ಮಾತು ಬರುವುದಿಲ್ಲ. ಅವರಿಗೆ ಸಾಲ ಮನ್ನಾ ಮಾಡಲು ಆಗದಿದ್ದರೆ, ಬಹುಮತ ದೊರಕದೇ ಇದ್ದರೆ ಕುರ್ಚಿ ಬಿಟ್ಟು ತೊಲಗಲಿ’ ಎಂದರು.

‘ಕಪ್ಪು ಹಣವನ್ನು ವಶಪಡಿಸಿಕೊಂಡು ದೇಶದ ಪ್ರತಿ ನಾಗರಿಕನ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಜಮಾ ಮಾಡುವುದಾಗಿ ಮೋದಿ ಅವರು ನೀಡಿದ ಭರವಸೆಯನ್ನು, ರಾಜ್ಯದ ರೈತರ ಸಾಲ ಮನ್ನಾ ಭರವಸೆಯೊಂದಿಗೆ ಹೋಲಿಸಬೇಡಿ’ ಎಂದರು.

‘ಮತ್ತೆ ಆಪರೇಷನ್‌ ಕಮಲದ ಪ್ರಸ್ತಾಪ ಇಲ್ಲ. 104 ಸ್ಥಾನ ಗೆದ್ದರೂ ನಮಗೆ ಅಧಿಕಾರ ಸಿಗಲಿಲ್ಲ. ಆದರೂ ಅಧಿಕಾರಕ್ಕಾಗಿ ಬೇರೆ ಪಕ್ಷಗಳ ಶಾಸಕರನ್ನು ಕರೆತರುವಲ್ಲಿ ನಮಗೆ ಆಸಕ್ತಿ ಇಲ್ಲ. ಅದು ಬೇಕಾಗಿಯೂ ಇಲ್ಲ’ ಎಂದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ‘ಉಪ ಚುನಾವಣೆಗಳನ್ನು ಎದುರಿಸಬೇಕೆಂದು ನನ್ನ ಹಣೆಯಲ್ಲಿ ಬರೆದಿದ್ದರೆ ಏನು ಮಾಡಲು ಸಾಧ್ಯ?’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.