ADVERTISEMENT

ನಗರದಲ್ಲಿ ಎಚ್‌ಡಿಕೆ ಅಬ್ಬರದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 9 ಮೇ 2018, 20:02 IST
Last Updated 9 ಮೇ 2018, 20:02 IST
ನಗರದಲ್ಲಿ ಎಚ್‌ಡಿಕೆ ಅಬ್ಬರದ ಪ್ರಚಾರ
ನಗರದಲ್ಲಿ ಎಚ್‌ಡಿಕೆ ಅಬ್ಬರದ ಪ್ರಚಾರ   

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನಗರದ ವಿವಿಧ ಬಡಾವಣೆಗಳಲ್ಲಿ ಬುಧವಾರ ಅಬ್ಬರದ ಪ್ರಚಾರ ನಡೆಸಿದರು.

ಬಾದಾಮಿ ಕ್ಷೇತ್ರದ ಗುಳೇದಗುಡ್ಡದಲ್ಲಿ ಬೆಳಿಗ್ಗೆ ಪ್ರಚಾರ ನಡೆಸಿದ ಕುಮಾರಸ್ವಾಮಿ ಬಳಿಕ ಬೆಂಗಳೂರಿನಲ್ಲೂ ಪ್ರಚಾರ ನಡೆಸಿದರು. ಬಿಟಿಎಂ ಲೇಔಟ್‌, ಚಿಕ್ಕಪೇಟೆ, ಶಾಂತಿನಗರ, ಪುಲಕೇಶಿನಗರ, ಹೆಬ್ಬಾಳ, ಯಲಹಂಕ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಯಾಚನೆ ಮಾಡಿದರು.

‘ಕಳೆದ 70 ವರ್ಷಗಳಲ್ಲಿ ಬೇರೆ ಪಕ್ಷಗಳ ಆಡಳಿತ ನೋಡಿದ್ದೀರಿ. ರಾಜ್ಯದ ಅಭಿವೃದ್ಧಿಗಾಗಿ ಈ ಬಾರಿ ನಮಗೆ ಒಂದು ಅವಕಾಶ ನೀಡಿ’ ಎಂದು ಅವರು ಮನವಿ ಮಾಡಿದರು.

ADVERTISEMENT

20 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಕಾರ್ಯಕ್ರಮಗಳು ಇನ್ನೂ ಜನಮಾನಸದಲ್ಲಿ ಉಳಿದಿದೆ. ಇನ್ನೊಂದು ಅವಕಾಶ ಕೊಟ್ಟರೆ, ಅಂತಹ ಕಾರ್ಯಕ್ರಮಮುಂದುವರಿಸುತ್ತೇನೆ ಎಂದರು.

ಈಗಿನ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದೆ. ಆದ್ದರಿಂದ ಸರ್ಕಾರ ಕಿತ್ತೊಗೆಯುವ ಜವಾಬ್ದಾರಿ ಜನರದ್ದು. ಬಡ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯ ಸಿಗದ ಸ್ಥಿತಿ ಇದೆ. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಏರಿಸಲು ಸಿದ್ಧ ಎಂದು ಅವರು ಹೇಳಿದರು.

ಕ್ರೈಸ್ತರಿಗೆ ಜೆರುಸಲೇಂ ಯಾತ್ರೆ; ಜೆಡಿಎಸ್‌ ಭರವಸೆ: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಜೆರುಸಲೇಂ ಪವಿತ್ರ ಯಾತ್ರೆಗೆ ಸಹಾಯ ಧನ ನೀಡುವುದಾಗಿ ಭರವಸೆ ನೀಡಿದೆ.

ಪಕ್ಷದ ಪ್ರಣಾಳಿಕೆಗೆ ಪೂರಕವಾಗಿ ಇನ್ನೂ ಕೆಲವು ಭರವಸೆಗಳ ಪಟ್ಟಿಯನ್ನು ಬುಧವಾರ ಜೆಡಿಎಸ್‌ ಬಿಡುಗಡೆ ಮಾಡಿದೆ.

ಕ್ರೈಸ್ತ ಸಮುದಾಯ ಭವನ, ಚರ್ಚ್‌ಗಳ ಅಭಿವೃದ್ಧಿ, ಧರ್ಮಗುರುಗಳು ಮತ್ತು ಧರ್ಮ ಪ್ರಚಾರಕರಿಗೆ ರಕ್ಷಣೆ ವ್ಯವಸ್ಥೆ, ಅಂಗವಿಕಲರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ, ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗುವುದು. ಅಂಗವಿಕಲರ ಹಕ್ಕು ಕಾಯ್ದೆ 2016 ನ್ನು ಸಂಪೂರ್ಣ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.