ADVERTISEMENT

ಮುಂಬೈ ಮಾದರಿಯಲ್ಲಿ ‘ಬಿ–ರೈಡ್‌’: ನವ ಬೆಂಗಳೂರಿಗೆ ಬಿಜೆಪಿ 42 ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಕೇಂದ್ರ ಸಚಿವ ಅನಂತಕುಮಾರ್‌ ಪ್ರಣಾಳಿಕೆ ಬಿಡುಗಡೆ ಮಾಡಿ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ ಜಾವಡೇಕರ್‌ ಅವರಿಗೆ ನೀಡಿದರು. ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಸಂಸದ ಪಿ.ಸಿ. ಮೋಹನ್‌, ಶಾಸಕರಾದ ಆರ್‌. ಅಶೋಕ, ಸುರೇಶ್‌ ಕುಮಾರ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದಾರೆ–ಪ್ರಜಾವಾಣಿ ಚಿತ್ರ
ಕೇಂದ್ರ ಸಚಿವ ಅನಂತಕುಮಾರ್‌ ಪ್ರಣಾಳಿಕೆ ಬಿಡುಗಡೆ ಮಾಡಿ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ ಜಾವಡೇಕರ್‌ ಅವರಿಗೆ ನೀಡಿದರು. ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಸಂಸದ ಪಿ.ಸಿ. ಮೋಹನ್‌, ಶಾಸಕರಾದ ಆರ್‌. ಅಶೋಕ, ಸುರೇಶ್‌ ಕುಮಾರ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದಾರೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂಬೈ ಮಾದರಿಯಲ್ಲಿ ‘ಬಿ–ರೈಡ್‌’ (ಬೆಂಗಳೂರು ರೈಲ್ವೆ ಇನ್ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌) ಎಂಬ ಸಂಸ್ಥೆ ಆರಂಭಿಸಲಾಗುತ್ತದೆ. ಅಂತರರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ಬಿಎಂಟಿಸಿ, ಬಿಎಂಆರ್‌ಸಿಎಲ್‌ ಹಾಗೂ ಉಪನಗರ ರೈಲು ಸಂಪರ್ಕಕ್ಕಾಗಿ ಬೆಂಗಳೂರು ಮೆಟ್ರೊಪಾಲಿಟನ್‌ ಟ್ರಾನ್ಸಿಟ್‌ ಅಥಾರಿಟಿ (ಬಿಎಂಟಿಎ) ಸ್ಥಾಪಿಸಲಾಗುವುದು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಬೆಂಗಳೂರಿಗಾಗಿ ಹೊರತಂದಿರುವ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳಿವು. ಪ್ರಣಾಳಿಕೆಯನ್ನು ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಶಾಸಕ ಆರ್‌. ಅಶೋಕ ಮಂಗಳವಾರ ಬಿಡುಗಡೆ ಮಾಡಿದರು.

ಎಲ್ಲ ಕುಟುಂಬಗಳಿಗೂ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ‘ಆಯುಷ್ಮಾನ್‌ ಭಾರತ್‌’ ಯೋಜನೆಯನ್ನು ನಗರದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುವುದು. ನಗರದಲ್ಲಿ ಒಂದು ಕೋಟಿ ಗಿಡಗಳನ್ನು ನೆಡಲಾಗುವುದು. ನವ ಬೆಂಗಳೂರಿಗೆ ‘ನವ ಬೆಂಗಳೂರು ಕಾಯ್ದೆ’ ಜಾರಿಗೆ ತರಲಾಗುವುದು. ಪ್ರತಿ ವರ್ಷಕ್ಕೊಮ್ಮೆ ನಗರದ ಜನತೆಗೆ ಸಾಧನೆ ವರದಿ ನೀಡಲಾಗುತ್ತದೆ. ನಗರದ ಸರ್ವಾಂಗೀಣ ಅಭಿವೃದ್ಧಿಗೆ 15 ವರ್ಷಗಳ ದೀರ್ಘಾವಧಿ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ 2033) ಸಿದ್ಧಪಡಿಸಲಾಗುತ್ತದೆ.

ADVERTISEMENT

ಅನಂತಕುಮಾರ್‌ ಮಾತನಾಡಿ, ‘ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಬೆಂಗಳೂರು ‘3 ಜಿ’ (ಗಾರ್ಬೇಜ್‌, ಗುಂಡಿ, ಗೂಂಡಾಗಿರಿ) ನಗರ ಆಗಿದೆ. ನಾವು ಜನರಲ್ಲಿ ಸುರಕ್ಷತೆಯ ಭಾವ ಮೂಡಿಸುತ್ತೇವೆ. ಆಡಳಿತದಲ್ಲಿ ಪಾರದರ್ಶಕತೆ ತರುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.