ಗುಪ್ತವಾಗಿ ಮತ್ತು ಸ್ವತಂತ್ರವಾಗಿ ಮತ ಚಲಾಯಿಸುವ ಮೂಲಕ ನಾವು ರಾಜಕೀಯ ಜವಾಬ್ದಾರಿಯನ್ನು ಪ್ರಕಟಿಸುತ್ತೇವೆ. ನಮ್ಮ ಕ್ಷೇತ್ರದಿಂದ ಆರಿಸಿ ಬಂದವರು ಕೇವಲ ಅವರಿಗೆ ವೋಟು ಹಾಕಿದವರಿಗಷ್ಟೇ ಅಲ್ಲ, ವಿರೋಧಿಸುವವರಿಗೂ ಬಾಧ್ಯರು. ವೋಟು ಗೋಪ್ಯವಾಗಿಡಲು ಇದೂ ಒಂದು ಕಾರಣ.
ರಾಜಕೀಯದಲ್ಲಿ ನಮ್ಮ ತೊಡಗುವಿಕೆ ಮತ ಹಾಕುವುದರಿಂದ ಕೊನೆಗೊಳ್ಳುವುದಿಲ್ಲ, ಬದಲಿಗೆ ಅಲ್ಲಿಂದ ಆರಂಭವಾಗುತ್ತದೆ ಎನ್ನಬಹುದು. ನಾವು ಮತ ಹಾಕಿದ ಅಭ್ಯರ್ಥಿ ಆರಿಸಿ ಬಂದಾಗ ಮಾತ್ರ ನಮ್ಮ ವೋಟು ಸಫಲವಾಗುವುದೆಂದು ಭಾವಿಸಬಾರದು. ಯಾಕೆಂದರೆ ವಿರೋಧವೂ ಪ್ರಜಾಪ್ರಭುತ್ವದಲ್ಲಿ ಮಹತ್ವದ್ದು. ವಿರೋಧದ ಪ್ರಾಬಲ್ಯವನ್ನು ಲಕ್ಷಿಸಿ, ಕೆಲವು ಸಲ
ವಿರೋಧಿ ಮತಗಳೇ ಮಹತ್ವದ ರಾಜಕೀಯ ನಿರ್ಧಾರಗಳಿಗೆ ಕಾರಣವಾಗುವ ಪ್ರಸಂಗ ಕೂಡ ಬರಬಹುದು.
ಆಮಿಷಕ್ಕೆ ಒಳಗಾಗಿಯೋ, ನಿಷ್ಕಾಳಜಿಯಿಂದಲೋ ಅಪಾತ್ರರಿಗೆ ಮತ ನೀಡುವುದರಿಂದ ವೈಯಕ್ತಿಕ ಮಟ್ಟದಲ್ಲಿ ಮಾತ್ರವಲ್ಲದೆ ಕ್ಷೇತ್ರದ/ ರಾಜ್ಯದ/ ರಾಷ್ಟ್ರದ
ಇತರರ ನಷ್ಟಕ್ಕೂ ಹೊಣೆಗಾರರಾಗುತ್ತೇವೆ. ಆದ್ದರಿಂದ ಮತ ಚಲಾಯಿಸುವುದು ಗುರುತರವಾದ ಜವಾಬ್ದಾರಿ ಕೂಡ.
– ವಿವೇಕ ಶಾನಭಾಗ, ಕಥೆಗಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.