ಬೆಂಗಳೂರು: ‘ಜೆಡಿಎಸ್ ಮುಖಂಡರೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಮೂಲಕ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತವನ್ನು ಯಶಸ್ವಿಗೊಳಿಸಿ’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪಕ್ಷದ ಮುಖಂಡರು ಹಾಗೂ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಅವರು, ದೊಮ್ಮಲೂರಿನ ಹಿಲ್ಟನ್ ಹೋಟೆಲ್ನಲ್ಲಿ ತಂಗಿರುವ ಪಕ್ಷದ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ‘ಆಡಳಿತ ನಡೆಸುವಾಗ ಸಮಸ್ಯೆ ಹಾಗೂ ಗೊಂದಲಗಳು ಎದುರಾದರೆ, ಎರಡೂ ಪಕ್ಷಗಳ ಮುಖಂಡರು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಸಮ್ಮಿಶ್ರ ಸರ್ಕಾರದ ಅಳಿವು–ಉಳಿವು ಮುಂಬರುವ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಜಾಗರೂಕತೆಯಿಂದ ಇರಿ’ ಎಂದಿದ್ದಾರೆ.
‘ರಾಜ್ಯದಲ್ಲಿ ಅಧಿಕಾರ ಕೈತಪ್ಪಿದ್ದಕ್ಕೆ ಕೇಂದ್ರದ ಎನ್ಡಿಎ ಸರ್ಕಾರ, ತನಿಖಾ ಏಜೆನ್ಸಿಗಳ ಮೂಲಕ ತಮ್ಮ ಮೇಲೆ ದಾಳಿ ಮಾಡಿಸಬಹುದು ಎಂಬ ಭಯವನ್ನು ಯಾರೂ ಇಟ್ಟುಕೊಳ್ಳಬೇಡಿ. ರಾಜಕೀಯ ಸನ್ನಿವೇಶ ಒಂದೇ ರೀತಿಯಾಗಿ ಇರುವುದಿಲ್ಲ. ನಿಮ್ಮೊಂದಿಗೆ ಹೈಕಮಾಂಡ್ ಇದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದೇ ನಮ್ಮ ಗುರಿಯಾಗಿರಲಿ’ ಎಂದು ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ಮಾತನಾಡಿ, ‘ಸಿದ್ದರಾಮಯ್ಯ ಚೆನ್ನಾಗಿಯೇ ಕೆಲಸ ಮಾಡಿದ್ದರು. ಅವರ ಮೇಲೆ ದೊಡ್ಡ ಆರೋಪಗಳು ಯಾವುವೂ ಇರಲಿಲ್ಲ. ಆದರೂ, ಚುನಾವಣೆಯಲ್ಲಿ ಪಕ್ಷ ಯಾಕೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ. ಏನೇ ಆದರೂ ನಾವು ಜನಾದೇಶವನ್ನು ಒಪ್ಪಿಕೊಳ್ಳಲೇಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.