ಬಾಗಲಕೋಟೆ: ಬಾದಾಮಿ ಕ್ಷೇತ್ರದಲ್ಲಿ ಶನಿವಾರ ಪ್ರಚಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಲಿನ ಶಿವಯೋಗ ಮಂದಿರಕ್ಕೆ ಭೇಟಿ ನೀಡಿ ಹಾನಗಲ್ ಕುಮಾರಸ್ವಾಮಿಗಳ ಗದ್ದುಗೆ ದರ್ಶನ ಪಡೆದರು.
ಈ ವೇಳೆ ಶಿವಯೋಗ ಮಂದಿರದ ಅಧ್ಯಕ್ಷ ಡಾ. ಸಂಗನಬಸವ ಸ್ವಾಮೀಜಿ ಇರಲಿಲ್ಲ. ಬದಲಿಗೆ, ಮಂದಿರದ ಧರ್ಮದರ್ಶಿಯೂ ಆದ ಕಾಂಗ್ರೆಸ್ ಮುಖಂಡ ಎಂ.ಬಿ.ಹಂಗರಗಿ ಅವರು ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು.
ಗದ್ದುಗೆಯಲ್ಲಿ ಆರತಿ ತಟ್ಟೆಗೆ ₹2,000 ಕಾಣಿಕೆ ಹಾಕಿದ ಸಿದ್ದರಾಮಯ್ಯ ನಂತರ, ಅಲ್ಲಿಯೇ ಇದ್ದ ವಿಭೂತಿ ಭಸ್ಮ ಧರಿಸಿದರು. ಈ ವೇಳೆ, ಸ್ಥಳದಲ್ಲಿದ್ದ ಮಂದಿರದ ವಟುಗಳೊಂದಿಗೆ (ವಿದ್ಯಾರ್ಥಿಗಳು) ಚರ್ಚೆ ನಡೆಸಿದರು. ಹಿರಿಯ ವಟುವೊಬ್ಬರು ಮುಖ್ಯಮಂತ್ರಿಗೆ ಶಾಲು ಹೊದಿಸಿ ಸನ್ಮಾನಿಸಿ, ಶಿವಯೋಗ ಮಂದಿರದ ಇತಿಹಾಸ ಕುರಿತಾದ ಪುಸ್ತಕಗಳನ್ನು ನೀಡಿದರು.
ಸಿದ್ದರಾಮಯ್ಯ ಅವರ ಜೊತೆ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಇದ್ದರು.
ದಿಢೀರ್ ನಿಗದಿ:
ಲಿಂಗಾಯತ ಪ್ರತ್ಯೇಕ ಧರ್ಮ ಮನ್ನಣೆ ವಿಚಾರದಲ್ಲಿ ವೀರಶೈವ– ಲಿಂಗಾಯತ ಪರ ಇದ್ದ ಶ್ರೀಗಳ ಕಾರ್ಯಕ್ಷೇತ್ರವಾಗಿದ್ದ ಶಿವಯೋಗ ಮಂದಿರಕ್ಕೆ ಮುಖ್ಯಮಂತ್ರಿ ಚುನಾವಣೆ ಸಂದರ್ಭದಲ್ಲಿ ಭೇಟಿ ನೀಡಿರುವುದು ಮಹತ್ವ ಪಡೆದಿದೆ.
‘ಡಾ. ಸಂಗನಬಸವ ಸ್ವಾಮೀಜಿ ಅವರಿಗೆ ಗದಗ ಜಿಲ್ಲೆ ಇಟಗಿಯಲ್ಲಿ ಭಕ್ತರು ತುಲಾಭಾರ ಹಮ್ಮಿಕೊಂಡಿದ್ದಾರೆ. ಹಾಗಾಗಿ ಅಲ್ಲಿಗೆ ತೆರಳಿದ್ದಾರೆ. ಮುಖ್ಯಮಂತ್ರಿ ಭೇಟಿ ದಿಢೀರ್ ನಿಗದಿಯಾಗಿದೆ. ಹಾಗಾಗಿ ಅವರು ಮಂದಿರದಲ್ಲಿ ಇರಲಿಲ್ಲ. ಭಾನುವಾರ ಮರಳಲಿದ್ದಾರೆ’ ಎಂದು ಶ್ರೀಗಳ ಆಪ್ತ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.