ಹಾಸನ: ‘ಅಕ್ರಮ ನಡೆಸಿರುವ ನೈಸ್ ಕಂಪನಿಯಿಂದ ₹ 1,200 ಕೋಟಿಯನ್ನು ವಸೂಲಿ ಮಾಡಬೇಕು ಎಂದು ಸದನ ಸಮಿತಿ ಶಿಫಾರಸು ಮಾಡಿದೆ. ಆ ಹಣವನ್ನು ಖಜಾನೆಗೆ ತುಂಬಿಸಿಲ್ಲ. ಚುನಾವಣೆ ಖರ್ಚಿಗಾಗಿ ಕಾಂಗ್ರೆಸ್ ಇಲ್ಲವೇ ಸಿದ್ದರಾಮಯ್ಯ ಖಾತೆಗೆ ಜಮೆ ಆಗಿರಬಹುದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುರುವಾರ ಆರೋಪಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಆರೋಪಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ ಚೂರಿ ಇರಿತದ ಹಿಂದೆ ಸರ್ಕಾರದ ಚಿತಾವಣೆ ಇದೆಯೇ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನರ ಮುಂದೆ ಹೇಳಬೇಕು’ ಎಂದು ಆಗ್ರಹಿಸಿದರು.
‘ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಜತೆ ಹೊಂದಾಣಿಕೆ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲದಿಂದ ಗೆದ್ದೆವು ಎಂದು ಹೇಳಿದ್ದು ಮರೆತು ಹೋಯಿತೇ? ಬೆಂಬಲ ಕೊಡಿ ಎಂದು ಕಾಂಗ್ರೆಸ್ಗೆ ಅರ್ಜಿ ಹಾಕಿಲ್ಲ. ಕೇಂದ್ರ ನಾಯಕರ ಜೊತೆ ನಮ್ಮ ಅಭ್ಯರ್ಥಿ ಫಾರೂಕ್ ಮಾತನಾಡಿದ್ದಾರೆ. ಬಿಬಿಎಂಪಿಗೂ, ರಾಜ್ಯಸಭೆ ಚುನಾ
ವಣೆಗೂ ಸಂಬಂಧವಿಲ್ಲ’ ಎಂದರು.
ಬಿಜೆಪಿ ವಿರುದ್ಧವೂ ಹರಿಹಾಯ್ದ ಕುಮಾರಸ್ವಾಮಿ, ‘ಬಿಜೆಪಿ ನಾಯಕರು ಮತ್ತು ಯೋಗಿ ಆದಿತ್ಯನಾಥ್ ಪಾದಯಾತ್ರೆ ಮಾಡಬೇಕಿರುವುದು ಗುಜರಾತ್ನಲ್ಲಿ’ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.