ADVERTISEMENT

‘ಮೂರು ದಿನ ಬಾಗಿಲು ಹಾಕಿ ಕುಳಿತು ಉತ್ತರ ಸಿದ್ಧಪಡಿಸಿದ ಮುಖ್ಯಮಂತ್ರಿ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:15 IST
Last Updated 8 ಫೆಬ್ರುವರಿ 2018, 9:15 IST
‘ಮೂರು ದಿನ ಬಾಗಿಲು ಹಾಕಿ ಕುಳಿತು  ಉತ್ತರ ಸಿದ್ಧಪಡಿಸಿದ ಮುಖ್ಯಮಂತ್ರಿ’
‘ಮೂರು ದಿನ ಬಾಗಿಲು ಹಾಕಿ ಕುಳಿತು ಉತ್ತರ ಸಿದ್ಧಪಡಿಸಿದ ಮುಖ್ಯಮಂತ್ರಿ’   

ಕಲಬುರ್ಗಿ: ‘ಅದಿರು ಕಳ್ಳ ಸಾಗಣೆ ಕುರಿತು ನಾನು ಆರೋಪ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನ ಬಾಗಿಲು ಹಾಕಿಕೊಂಡು ಅಧಿಕಾರಿಗಳೊಂದಿಗೆ ಕುಳಿತು ಉತ್ತರ ಸಿದ್ಧ ಮಾಡಿಕೊಂಡಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ಬಳ್ಳಾರಿಯ ಸಂಡೂರಿನಿಂದ ಅದಿರು ಕಳ್ಳ ಸಾಗಣೆಯಾಗಿರುವ ಕುರಿತು ನಾನು ದಾಖಲೆ ಸಹಿತ ಆರೋಪ ಮಾಡಿದ್ದೇನೆ. ಆದರೆ, ನನ್ನ ಆರೋಪದ ಬಗ್ಗೆ ಅವರು ಇದುವರೆಗೂ ಬಾಯಿ ಬಿಟ್ಟಿಲ್ಲ. ಹೀಗಾಗಿ ನನ್ನನ್ನು ಹಿಟ್ ಅಂಡ್ ರನ್ ಕುಮಾರಸ್ವಾಮಿ ಎಂದು ಹೇಳುವ ನೈತಿಕತೆ ಅವರಿಗಿಲ್ಲ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ರಾಜ್ಯದ ವಿವಿಧ ಬಂದರುಗಳ ಮೂಲಕ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಿದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ವಹಿಸುವ ಮೂಲಕ ಬಳ್ಳಾರಿಯ ಸಂಡೂರಿನಿಂದ ಅದಿರು ಕಳ್ಳ ಸಾಗಣೆಯಾಗಿರುವ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆಪಾದಿಸಿದರು.

ADVERTISEMENT

ರಾಮ–ಕೃಷ್ಣನ ಲೆಕ್ಕ:

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಚೆಕ್ ಮೂಲಕ ಹಣ ಪಡೆದರೆ, ಸಿದ್ದರಾಮಯ್ಯ ಅವರು ರಾಮನ ಲೆಕ್ಕ- ಕೃಷ್ಣನ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಎಲ್ಲರ ಬಣ್ಣ ಬಯಲು ಮಾಡುತ್ತೇವೆ’ ಎಂದು ಗುಡುಗಿದರು.

ಹೆಗಡೆ ಕೊಡುಗೆ ಏನು?:

‘ಅಭಿವೃದ್ಧಿಯ ಸಮಗ್ರ ದೃಷ್ಟಿಕೋನ ಇಲ್ಲದ ಹಾಗೂ ನಾಡಿನ ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯದ ರಾಜಕಾರಣಿಗಳು ನಾಲಾಯಕ್ ಎಂದು ಹೇಳಿಕೆ ನೀಡಿರುವ ಅನಂತಕುಮಾರ ಹೆಗಡೆ ಅವರು ಆರು ಬಾರಿ ಸಂಸದರಾಗಿ ಉತ್ತರ ಕನ್ನಡ ಜಿಲ್ಲೆಗೆ ನೀಡಿರುವ ಕೊಡುಗೆ ಏನು’ ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಅಭಿವೃದ್ಧಿ ಮಾಡದ ಅನಂತಕುಮಾರ ತಮ್ಮನ್ನು ತಾವೇ ನಾಲಾಯಕ್ ಎಂದು ಕರೆದುಕೊಂಡಿದ್ದಾರೆ. ವಿವಾದಿತ ಮಾತುಗಳ ಮೂಲಕ ನಾಯಕರಾಗಲು ಬಯಸಿರುವ ಅವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಬುದ್ಧಿಜೀವಿಗಳು, ಸಾಹಿತಿಗಳ ಬಗ್ಗೆ ಹಗುರವಾಗಿ ಮಾತನಾಡುವುದೇ ಅವರ ಸಾಧನೆಯಾಗಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.