ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ಎರಡು ಬಣಗಳ ನಡುವೆ ಭಾನುವಾರ ಇಲ್ಲಿ ನಡೆದ ಮಾರಾಮಾರಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದು ಈ ವೇಳೆ ಗಾಯಗೊಂಡಿದ್ದ ನಗರದ ಚಾಮರಾಜಪೇಟೆಯ ವಿನಯ್ (25) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ನಗರಕ್ಕೆ ವೀಕ್ಷಕರು ಬಂದಿದ್ದರು. ಸಿದ್ದೇಶ್ವರ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು. ಶಾಸಕ ಡಾ.ಕೆ.ಸುಧಾಕರ್ ಬೆಂಬಲಿಗರು ಭವನದ ಒಳಗೆ ಇದ್ದರು. ಮುಖಂಡರಾದ ನವೀನ್ ಕಿರಣ್ ಹಾಗೂ ಗಂಗರೇಕಾಲುವೆ ನಾರಾಯಣಸ್ವಾಮಿ ಅವರ ಬೆಂಬಲಿಗರು ಹೊರಭಾಗದಲ್ಲಿ ಇದ್ದರು.
ನವೀನ್ ಕಿರಣ್ ಅವರನ್ನು ಭವನದ ಹೊರಗೆ ನಿಲ್ಲಿಸಿದ್ದಕ್ಕೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಅವರನ್ನು ಒಳಗೆ ಕರೆದು ವೀಕ್ಷಕರು ಅರ್ಜಿ ಸ್ವೀಕರಿಸಿದರು. ಈ ವೇಳೆ ಸುಧಾಕರ್ ಮತ್ತು ನವೀನ್ ಕಿರಣ್ ಬೆಂಬಲಿಗರ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿದರು.
‘ಲಾಠಿ ಚಾರ್ಚ್ನಿಂದ ವಿನಯ್ಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಅವರು ಭಯಭೀತರಾಗಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಮತ್ತು ವೈದ್ಯರು ತಿಳಿಸಿದ್ದಾರೆ.
’ಲಾಠಿ ಪ್ರಹಾರದಿಂದಲೇ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿ ನವೀನ್ ಕಿರಣ್ ಬೆಂಬಲಿಗರು ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಶವ ಇಟ್ಟು ಪ್ರತಿಭಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.