ADVERTISEMENT

‘ಮೋದಿ ಅಧಿಕಾರಕ್ಕೆ ಮರಳಿದರೆ ರಾಹುಲ್‌ ಹೊಣೆ’ –ಕೇಜ್ರಿವಾಲ್‌

​ಪ್ರಜಾವಾಣಿ ವಾರ್ತೆ
Published 10 ಮೇ 2019, 15:56 IST
Last Updated 10 ಮೇ 2019, 15:56 IST
   

ನವದೆಹಲಿ: ‘ನರೇಂದ್ರ ಮೋದಿ ಅವರು ಒಂದು ವೇಳೆ ಅಧಿಕಾರಕ್ಕೆ ಮರಳಿದರೆ ಅದಕ್ಕೆ ರಾಹುಲ್‌ ಗಾಂಧಿ ಅವರೇ ಹೊಣೆಗಾರರು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶುಕ್ರವಾರ ಆರೋಪಿಸಿದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ‘ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿ, ಕೇರಳದಲ್ಲಿ ಎಡರಂಗ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌, ರಾಜಧಾನಿಯಲ್ಲಿ ಎಎಪಿಗೆ ಧಕ್ಕೆ ಉಂಟು ಮಾಡಿದ್ದಾರೆ’ ಎಂದು ದೂರಿದರು.

ಎಎಪಿ–ಕಾಂಗ್ರೆಸ್‌ ನಡುವಣ ಮೈತ್ರಿ ಫಲಪ್ರದವಾಗದ ರಾಜಧಾನಿಯಲ್ಲಿ ತ್ರಿಕೋನ ಸ್ಪರ್ಧೆ ನಡೆದಿದ್ದು, ಮತದಾನಕ್ಕೆ ಎರಡು ದಿನ ಮುನ್ನ ಈ ಹೇಳಿಕೆ ಹೊರಬಿದ್ದಿದೆ. ‘ಕಾಂಗ್ರೆಸ್‌ ಪಕ್ಷವು ಬಿಜೆಪಿಗೆ ಬದಲಾಗಿ ವಿರೋಧಪಕ್ಷಗಳ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತಿರುವಂತಿದೆ’ ಎಂದು ಹೇಳಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಯಾವುದೇ ಸಾಧನೆ ಆಗಿಲ್ಲ. ಮೋದಿ ಅವರ ರಾಷ್ಟ್ರೀಯತೆ ಚಿಂತನೆಯೇ ನಕಲಿಯಾಗಿದ್ದು, ದೇಶಕ್ಕೆ ಅಪಾಯಕಾರಿ. ಹೇಳಿಕೊಳ್ಳಲು ಸಾಧನೆ ಇಲ್ಲದೆ, ಸೇನೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ’ ಎಂದು ಟೀಕಿಸಿದರು.

ಮನಮೋಹನ್‌ ಸಿಂಗ್‌ ಅವರು ಮೋದಿಗೆ ಹೋಲಿಸಿದಲ್ಲಿ ಸಾವಿರ ಪಟ್ಟು ಉತ್ತಮ ಪ್ರಧಾನಿ. ಈ ಚುನಾವಣೆಯ ಬಳಿಕ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಏಕೈಕ ಗುರಿ ಮೋದಿ, ಶಾ ಅಧಿಕಾರಕ್ಕೆ ಮರಳದಂತೆ ತಡೆಯುವುದು. ಇದಕ್ಕಾಗಿ ಯಾರಿಗಾದರೂ ಬೆಂಬಲಿಸುತ್ತೇವೆ’ ಎಂದರು.

‘ರಾಜಧಾನಿಯಲ್ಲಿ ಎಎಪಿ ಉತ್ತಮ ಸಾಧನೆ ಮಾಡಲಿದೆ. ಕಳೆದ 10 ದಿನದಲ್ಲಿ ಪರಿಸ್ಥಿತಿ ಬದಲಾಗಿದೆ. 2015ರಲ್ಲಿ ಎಎಪಿ 67 ಸ್ಥಾನ ಗೆದ್ದಂತಹ ಸ್ಥಿತಿಯೇ ಈಗಲೂ ಇದೆ. ಎಲ್ಲ ಏಳು ಸ್ಥಾನವನ್ನು ಎಎಪಿ ಗೆದ್ದರೂ ನನಗೆ ಆಶ್ಚರ್ಯ ಎನಿಸುವುದಿಲ್ಲ’ ಎಂದು ಕೇಜ್ರೀವಾಲ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.