ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂದರೆ ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಸೋಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ನಡೆಸಿದ ಮಾತುಕತೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಪ್ರೀತಂ, ‘ ನಿಮಗೆ (ಜೆಡಿಎಸ್ಗೆ) ಮತ ಹಾಕುತ್ತೇವೆ ಎಂದು ಹೇಳಿ ಹಣ ತೆಗೆದುಕೊಂಡು ಕೊನೆಗೆ ಬಿಜೆಪಿಗೆ ಮತ ಹಾಕಿ. ಈಗಲೇ ಪ್ರಜ್ವಲ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಏಕವಚನದಲ್ಲಿ ಮಾತನಾಡಿಸುತ್ತಾನೆ. ಕಾರ್ಯಕರ್ತರಿಗೆ ಬೆಲೆ ಕೊಡಲ್ಲ. ಜೆಡಿಎಸ್ ಕಾರ್ಯಕರ್ತರಿಗೆ ಕೆಲಸ ಸಿಗಬೇಕಾದರೆ, ಗೌರವ ದೊರೆಯಬೇಕಾದರೆ ಆತನನ್ನು ಸೋಲಿಸಬೇಕಿದೆ. ಈ ಚುನಾವಣೆಯಲ್ಲೂ ಅವರೇ ಗೆದ್ದರೆ ಕಾರ್ಯಕರ್ತರ ಕಥೆ ಮುಗಿತು’ ಎನ್ನುವ ಮೂಲಕ ಜೆಡಿಎಸ್ ಕಾರ್ಯಕರ್ತರನ್ನು ಸೆಳೆಯವುದು ಹೇಗೆ ಎಂದು ಶಾಸಕರು ತಂತ್ರದ ಪಾಠ ಹೇಳಿದ್ದಾರೆ.
‘ಈಗ ಬೂತ್ಗೆ ಒಂದು ಲಕ್ಷ ರೂಪಾಯಿ ನೀಡುತ್ತಿದ್ದಾರೆ. ಸೋತರೆ ಮುಂದಿನ ಚುನಾವಣೆಯಲ್ಲಿ ಐದು ಲಕ್ಷ ರೂಪಾಯಿ ನೀಡುತ್ತಾರೆ. ಸೋತಾಗಲೇ ಅವರು ಕಾರ್ಯಕರ್ತರನ್ನ ಕರೆದು ಕೆಲಸ ಕೊಡುವುದು’ ಎಂದು ಸಲಹೆ ನೀಡಿದ್ದಾರೆ.
‘ಈಗ ಪ್ರಜ್ವಲ್ ಗೆಲ್ಲಿಸಿದರೆ ದುರಹಂಕಾರ ಹೆಚ್ಚಾಗುತ್ತೆ. ಮುಂದೆ ಯಾರನ್ನೂ ಸರಿಯಾಗಿ ಮಾತನಾಡಿಸುವುದಿಲ್ಲ. ಹುಡುಗನ (ಪ್ರಜ್ವಲ್) ಬಳಿ ಕೈ ಕಟ್ಟಿ ನಿಲ್ಲಬೇಕೆ. ಅವರಿಗೆ ಭಯ ಹುಟ್ಟಿಸಿದರೆ ಮಾತ್ರ ಗೌರವ ಬರುತ್ತದೆ. ಗೆಲ್ಲಲು ಏನು ಮಾಡಬೇಕು ಅದನ್ನು ಮಾಡಬೇಕು. ಅವರು ಹೇಗೆ ಮಾಡುತ್ತಾರೋ ಅದೇ ರೀತಿ ನೀವು ಮಾಡಿ, ಜೆಡಿಎಸ್ ಕಾರ್ಯಕರ್ತರನ್ನು ನಮ್ಮ ದಾರಿಗೆ ತರಬೇಕು’ ಎಂದು ಪ್ರೀತಂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಗೌಡ ಕಾಣಿಸಿಕೊಂಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.