ADVERTISEMENT

ಮತದಾನ ಮಾಡಲು ಹನುಮಂತಪ್ಪ ಮನವಿ; ಸೈಕಲ್ ಜಾಥಾ ನಡೆಸಿದ ಗಾಯಕ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 15:13 IST
Last Updated 8 ಏಪ್ರಿಲ್ 2019, 15:13 IST
ಹಾವೇರಿಯಲ್ಲಿ ಸೋಮವಾರ ಮತದಾನ ಜಾಗೃತಿಯ ಸೈಕಲ್ ಜಾಥಾದಲ್ಲಿ ಪಾಲ್ಗೊಂಡ ಗಾಯಕ ಹನುಮಂತಪ್ಪ
ಹಾವೇರಿಯಲ್ಲಿ ಸೋಮವಾರ ಮತದಾನ ಜಾಗೃತಿಯ ಸೈಕಲ್ ಜಾಥಾದಲ್ಲಿ ಪಾಲ್ಗೊಂಡ ಗಾಯಕ ಹನುಮಂತಪ್ಪ   

ಹಾವೇರಿ: ಮತದಾನ ಜಾಗೃತಿಯ ಜಿಲ್ಲಾ ರಾಯಭಾರಿ, ಸವಣೂರ ತಾಲ್ಲೂಕಿನ ಚಿಲ್ಲೂರಬಡ್ನಿಯ ಗಾಯಕ ಹನುಮಂತಪ್ಪ ಸೋಮವಾರ ಸಂಜೆ ನಗರದಲ್ಲಿ ಸೈಕಲ್ ಸವಾರಿ ಮೂಲಕ ಜಾಗೃತಿ ಮೂಡಿಸಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಿಂದ ಹೊರಟು, ಜೆ.ಎಚ್‌.ಪಟೇಲ್ ವೃತ್ತ, ವಿ.ಕೃ. ಗೋಕಾಕ ವೃತ್ತ ಎಂ.ಜಿ. ರಸ್ತೆ ಮಾರ್ಗವಾಗಿ ಪಿ.ಬಿ.ರಸ್ತೆಯ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ವಿದ್ಯಾರ್ಥಿಗಳೊಂದಿಗೆ ಸೈಕಲ್‌ನಲ್ಲಿ ಬಂದು ಸ್ಫೂರ್ತಿ ತುಂಬಿದರು.

ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಗಾಯಕ ಹನುಮಂತಪ್ಪ, ‘ತಪ್ಪದೇ ಮತದಾನ ಮಾಡಿ. ಇದು ನಮ್ಮ ಆದ್ಯ ಕರ್ತವ್ಯ’ ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲೀಲಾವತಿ ಮಾತನಾಡಿ, ‘ಹಾವೇರಿ ಜಿಲ್ಲೆಯವರೇ ಆದ ಗಾಯಕ ಹನುಮಂತಪ್ಪ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈಗಾಗಲೇ ಸವಣೂರ ಭಾಗದಲ್ಲಿ ವಿ.ವಿ.ಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ಮತದಾನ ಜಾಗೃತಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅರಿವು ಮೂಡಿಸಿದ್ದಾರೆ. ಏ.17ರಂದು ನಡೆಯುವ ಮತಗೋಷ್ಠಿ ಹಾಗೂ ಏ.19 ರಂದು ನಡೆಯುವ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ’ ಎಂದರು.

ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಶಾಕೀರ್ ಅಹ್ಮದ್, ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.