ADVERTISEMENT

ಎಸ್‌ಯುಸಿಐ ಅಭ್ಯರ್ಥಿ ಬೆಂಬಲಿಸಿ: ಎಸ್.ಆರ್. ಹಿರೇಮಠ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 11:15 IST
Last Updated 9 ಏಪ್ರಿಲ್ 2019, 11:15 IST

ಹುಬ್ಬಳ್ಳಿ: ಲೋಕಸಭಾ ಚುನಾವಣಾ ಕಣದಲ್ಲಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಭ್ರಷ್ಟರಾಗಿದ್ದು, ಪರ್ಯಾಯ ರಾಜಕಾರಣದ ಆಶಯದೊಂದಿಗೆ ಕಣಕ್ಕಿಳಿದಿರುವ ಎಸ್‌ಯುಸಿಐ ಅಭ್ಯರ್ಥಿ ಗಂಗಾಧರ ಬಡಿಗೇರ ಅವರನ್ನು ಜನರು ಬೆಂಬಲಿಸಬೇಕು ಎಂದು ಸಮಾಜ ‍ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್. ಹಿರೇಮಠ್ ಮನವಿ ಮಾಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣವಿಲ್ಲದೆ ಚುನಾವಣೆ ಎದುರಿಸಲು ಸಾಧ್ಯವೇ ಇಲ್ಲ ಎಂಬಂತರ ವಿಷಮ ಸ್ಥಿತಿಯನ್ನು ಭ್ರಷ್ಟ ರಾಜಕಾರಣಿಗಳು ನಿರ್ಮಾಣ ಮಾಡಿದ್ದಾರೆ. ಎಂಎಸ್ಸಿ ಪದವೀಧರನಾಗಿರುವ ಗಂಗಾಧರ ಅವರು ತಮ್ಮ ಬಗ್ಗೆ ಮಾತ್ರ ಚಿಂತೆ ಮಾಡಿದ್ದರೆ ಆರಾಮಾಗಿ ಇರಬಹುದಿತ್ತು. ಆದರೆ, ಜನರ ಪರವಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಚುನಾವಣೆಗೆ ನಿಂತಿದ್ದಾರೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದರು.

ಈ ರೀತಿಯ ಪರ್ಯಾಯ ರಾಜಕಾರಣಕ್ಕೆ ಯಶಸ್ಸು ಕಾಣುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತತ್ವಾಧಾರಿತ ಜನ ಕೇಂದ್ರಿತ ರಾಜಕಾರಣ ಮಾಡುವಾಗ ತಾಳ್ಮೆ ಕಳೆದುಕೊಳ್ಳಬಾರದು ಎಂದರು.

ADVERTISEMENT

ಚುನಾವಣೆಯ ಸಂದರ್ಭದಲ್ಲಿ ಜನರ ವಿಷಯ ಹಾಗೂ ಸಮಸ್ಯೆ ಚರ್ಚೆಯಾಗುತ್ತಿಲ್ಲ. ನೀರಸಾಗರ ತುಂಬಿ ಹಲವು ವರ್ಷಗಳೆ ಕಳೆದಿದ್ದು, ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಆದರೆ ಇದನ್ನು ಯಾವ ಅಭ್ಯರ್ಥಿಗಳು ಪ್ರಸ್ತಾಪ ಮಾಡುತ್ತಿಲ್ಲ ಎಂದು ಗಂಗಾಧರ ಬಡಿಗೇರ ಹೇಳಿದರು.

ಎಸ್‌ಯುಸಿಐ ಮುಖಂಡ ರಾಮಾಂಜಿನಪ್ಪ ಮಾತನಾಡಿ, ಜನರಿಂದಲೇ ₹ 1.07 ಲಕ್ಷ ಸಂಗ್ರಹಿಸಿ ಚುನಾವಣಾ ವೆಚ್ಚಕ್ಕೆ ಬಳಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.