ಕೆಂಭಾವಿ: ‘ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಸಂವಿಧಾನ ದೇಶದ ಪ್ರತಿ ಪ್ರಜೆಗೆ ನೀಡಿರುವ ಹಕ್ಕು. ಅದನ್ನು ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಭು ದೊರೆ ಹೇಳಿದರು.
ಪಟ್ಟಣದ ಕೆಂಗೇರಿ ಬಡಾವಣೆಯಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸ್ವೀಪ್ ಸಮಿತಿಯಿಂದ ಶನಿವಾರ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
‘ಜನತಂತ್ರ ವ್ಯವಸ್ಥೆ ಬಲಗೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು. ಅರ್ಹ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತದಾರರು ತಮ್ಮ ಹಕ್ಕು ಚಲಾಯಿಸುವಾಗ ಸ್ವಂತ ವಿವೇಚನೆ ಬಳಸಬೇಕು’ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಸಂಜೀವರಾವ ಕುಲಕರ್ಣಿ ಮಾತನಾಡಿ, ‘ಪ್ರತಿ ವರ್ಷ ಚುನಾವಣಾ ಆಯೋಗ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರೂ ಮತದಾನ ಪ್ರಮಾಣ ಹೆಚ್ಚಾಗುತ್ತಿಲ್ಲ. ಸುಶಿಕ್ಷತರೇ ಮತದಾನದಿಂದ ಹಿಂದುಳಿಯುತ್ತಿರುದು ದುರಂತ. ಸಧೃಡ ದೇಶ ನಿರ್ಮಾಣಕ್ಕೆ ಮತದಾನ ಮಾಡಬೇಕು’ ಎಂದರು.
ಪ್ರಭಾರಿ ಉಪತಹಶೀಲ್ದಾರ ರಾಜೆಸಾಬ ಮಾತನಾಡಿ, ಚುನಾವಣಾ ಆಯೋಗದ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಮತದಾರರ ಚೀಟಿಗಳನ್ನು ವಿತರಿಸುತ್ತಾರೆ. ಚೀಟಿಗಳನ್ನು ಪಡೆದು ತಮ್ಮ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪವನ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರ್ ಅಧಿಕಾರಿ ಎಸ್.ವೈ.ಭಜಂತ್ರಿ, ರಾಜು ಪತಂಗೆ, ಅಂಗನವಾಡಿ ಮೇಲ್ವಿಚಾರಕಿ ಸುನೀತಾ ಪಾಟೀಲ, ನಾಗರಾಜ ವಿಭೂತಿ, ರೇವಣಸಿದ್ದಯ್ಯ ಮಠ, ಇಲಿಯಾಸ ಪಟೇಲ, ದುರ್ಗಾ ಪ್ರಸಾದ, ಬಸನಗೌಡ ಪಾಟೀಲ, ಹಳ್ಳೆರಾವ ಕುಲಕರ್ಣಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
ವಿಜಯಾಚಾರ್ಯ ಪುರೋಹಿತ ಮಾತನಾಡಿದರು. ರವಿರಾಜ ಕಂದಳ್ಳಿ ನಿರೂಪಿಸಿದರು, ಗುರುರಾಜ ಕುಲಕರ್ಣಿ ಸ್ವಾಗತಿಸಿದರು, ವೀರಣ್ಣ ಕಲಕೇರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.