ನಟ–ನಟಿಯರ ಮದುವೆ ಮಾತ್ರ ಮುರಿದುಬೀಳುತ್ತದೆ ಎಂಬಂತೆ ಆ ಕ್ಷೇತ್ರದ ವಿವಾಹ ವಿಚ್ಛೇನದಗಳ ಕುರಿತು ಅಭಿಪ್ರಾಯ ತೇಲಿಬಿಡುವುದು ಸರಿಯಲ್ಲ ಎಂದು ನಟಿ ಐಶ್ವರ್ಯಾ ರೈ ಪ್ರತಿಕ್ರಿಯಿಸಿದ್ದಾರೆ. ಹೃತಿಕ್ ರೋಷನ್–ಸುಸೇನ್ ದೀರ್ಘ ಕಾಲದ ದಾಂಪತ್ಯವೀಗ ಮುರಿದುಬಿದ್ದಿದೆ.
ಅದೇ ರೀತಿ ಅನುರಾಗ್ ಕಶ್ಯಪ್, ಕಲ್ಕಿ ಕೊಯ್ಲಿನ್ ಕೂಡ ಬೇರೆ ಬೇರೆ ಆಗಲು ತೀರ್ಮಾನಿಸಿದರು. ಈ ಘಟನೆಗಳ ಕುರಿತು ಗಮನ ಸೆಳೆದಾಗ, ಐಶ್ವರ್ಯಾ ಅರ್ಥಪೂರ್ಣ ಪ್ರತಿಕ್ರಿಯೆ ನೀಡಿದರು. ‘ಪ್ರತಿಯೊಬ್ಬರಿಗೂ ಅಭಿಪ್ರಾಯ ಇರುತ್ತದೆ. ಅವರದ್ದೇ ದೃಷ್ಟಿಕೋನದಲ್ಲಿ ಬದುಕುತ್ತಾ ಇರುತ್ತಾರೆ. ಅವರವರ ಖಾಸಗಿ ಬದುಕು ಹೇಗಿರುತ್ತದೆ ಎಂಬುದು ಅವರಿಗಷ್ಟೇ ಗೊತ್ತು.
ಯಾರದ್ದೋ ಪ್ರೀತಿ, ಮದುವೆ, ಸಂಬಂಧ ಇತ್ಯಾದಿಯ ಕುರಿತು ಸಾರ್ವತ್ರಿಕ ಅಭಿಪ್ರಾಯಕ್ಕೆ ಬರುವುದು ಸರಿಯಲ್ಲ. ಮೊದಲು ಅವರವರ ಅಭಿಪ್ರಾಯಗಳನ್ನು ಗೌರವಿಸೋಣ. ಆಮೇಲೆ ಅವರ ಆಯ್ಕೆ ಸರಿಯೋ ತಪ್ಪೋ ಎಂದು ವಿವೇಚಿಸೋಣ. ಸಿನಿಮಾದವರು ಮಾತ್ರ ಮದುವೆ ಮುರಿದುಕೊಳ್ಳುತ್ತಾರೆ ಎಂಬಂಥ ಭಾವನೆ ಸರಿಯಲ್ಲ’ ಎಂಬುದು ಐಶ್ವರ್ಯಾ ಕಿವಿಮಾತು.
ತಮ್ಮ ಮಗಳು ಆರಾಧ್ಯಾ ಕಣ್ಣುಗಳನ್ನು ಇಷ್ಟಪಡುವ ಐಶ್ವರ್ಯಾ, ಒಬ್ಬ ಭಾರತೀಯಳಾಗಿ ತಾವು ಅನುಸರಿಸಿಕೊಂಡು ಬಂದಿರುವ ಮೌಲ್ಯಗಳು, ಪಟ್ಟ ಶ್ರಮ, ಅನುಸರಿಸುವ ಸಂಪ್ರದಾಯ ಎಲ್ಲ ಖುಷಿ ಕೊಡುವ ವಿಚಾರಗಳು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.