“ಸದ್ಯಕ್ಕೆ ‘ದೇವ್ರಂಥ ಮನುಷ್ಯ’ ಸಿನಿಮಾದಲ್ಲಿ ಬ್ಯುಸಿ ಇದ್ದೀನಿ. ಆ ಸಿನಿಮಾ ಮುಗಿಸಿದ ನಂತ್ರ ರಪಕ್ ಅಂತ ಈ ಟೀಮ್ಗೆ ಸೇರಿಕೊಂಡು ಬಿಡ್ತೀನಿ’ ಇಷ್ಟು ಹೇಳಿದ ಪ್ರಥಮ್, ತಮ್ಮ ವಿಚಿತ್ರ ಮ್ಯಾನರಿಸಮ್ನಲ್ಲಿ ನಿರ್ದೇಶಕರತ್ತ ತಿರುಗಿ ‘ಆಗ್ತದಲ್ಲಾ ಸರ್, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ’ ಎಂದರು.
ಅವರು ಮಾತನಾಡುತ್ತಿದ್ದದ್ದು ತಮ್ಮ ಹೊಸ ಚಿತ್ರ ‘ಎಂ.ಎಲ್.ಎ’ ಬಗ್ಗೆ. ಈ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕ್ಲಾಪ್ ಮಾಡಿದ್ದು ವಿಶೇಷವಾಗಿತ್ತು. ಟಿ.ವಿ. ಕಾರ್ಯಕ್ರಮ ‘ಮಜಾ ಟಾಕೀಜ್’ಗೆ ಸಂಭಾಷಣೆ ಬರೆಯುತ್ತಿದ್ದ ಮೌರ್ಯ ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಸ್ಫೂರ್ತಿಯಾಗಿರುವುದು ರಾಮಕೃಷ್ಣ ಪರಮಹಂಸರ ಒಂದು ಕಥೆ. ಇದನ್ನು ನಿರ್ದೇಶಕರೇ ಹೇಳಿಕೊಂಡರು.
‘ನನಗೆ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರೆಂದರೆ ತುಂಬ ಇಷ್ಟ. ಅವರ ಬದುಕಿನ ಘಟನೆಯನ್ನು ಆಧರಿಸಿಯೇ ಕಥೆ ರೂಪಿಸಿದೆ. ಅದಕ್ಕೆ ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಹಾಸ್ಯಾತ್ಮಕವಾಗಿ ಸೇರಿಸಿದೆ’ ಎಂದ ಅವರು ‘ಯಾವುದೇ ರೀತಿ ವಿವಾದ ಮಾಡುವ ಉದ್ದೇಶ ಇಲ್ಲವೇ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.
ಒಳ್ಳೆ ಹುಡುಗ ಪ್ರಥಮ್ ಮುಖದಲ್ಲಿ ಅನಾಯಾಸವಾಗಿ ಎಂ.ಎಲ್.ಎ ಆದ ಖುಷಿ ಎದ್ದು ಕಾಣುತ್ತಿತ್ತು. ಅವರ ಪ್ರಕಾರ ಇದು ಒಂದು ರೀತಿಯಲ್ಲಿ ರಿಯಾಲಿಟಿ ಷೋದಂತಿರುವ ಸಿನಿಮಾ. ‘ಈ ಚಿತ್ರದಲ್ಲಿ ನನ್ನ ಪಾತ್ರವನ್ನು ನೋಡಿ ಜನರು ಇದ್ದರೆ ಇಂಥ ಎಂ.ಎಲ್.ಎ ಇರಬೇಕು ಎಂದು ಅಂದುಕೊಳ್ಳುತ್ತಾರೆ’ ಎಂಬ ವಿಶ್ವಾಸವೂ ಅವರಿಗಿದೆ.
ಈ ಚಿತ್ರದಲ್ಲಿ ಎರಡು ಛಾಯೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪ್ರಥಮ್.
‘ಮೊದಲ ಭಾಗದಲ್ಲಿ ಅಸಾಮಾನ್ಯ ಚಿಂತನೆ ಇರುವ ಸಾಮಾನ್ಯ ಹುಡುಗನಿಗೆ ಅಚಾನಕ್ ಆಗಿ ಎಂ.ಎಲ್.ಎ ಆಗುವ ಅವಕಾಶ ಸಿಗುತ್ತದೆ. ಆಗ ಏನೇನಾಗುತ್ತದೆ ಎನ್ನುವುದೇ ಸಿನಿಮಾ’ ಎಂದು ಕಥನದ ಎಳೆಯನ್ನೂ ಪ್ರಥಮ್ ಬಿಚ್ಚಿಟ್ಟರು.
ಈ ಸಿನಿಮಾವನ್ನು ವೇದಿಕೆಯಾಗಿಸಿಕೊಂಡು ರಾಜಕೀಯಕ್ಕೆ ಇಳಿಯುವ ಯೋಚನೆ ಇದೆಯೇ? ಎಂಬ ಪ್ರಶ್ನೆಗೆ ‘ಜನಸೇವೆ ಮಾಡೋಕೆ ಅರ್ಹತೆ ಮತ್ತು ನೈತಿಕತೆ ಎರಡೂ ನನಗಿನ್ನೂ ಬಂದಿಲ್ಲ’ ಎಂದು ಅವರು ಉತ್ತರಿಸಿದರು.
ಮಂಗಳೂರಿನ ಬೆಡಗಿ ಸೋಹಲ್ ಮಂತೆರೋ ಈ ಚಿತ್ರದಲ್ಲಿ ಪ್ರಥಮ್ ಜತೆ ನಾಯಕಿಯಾಗಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.
‘ಸಿ.ಎಂ. ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಾದಾಸೀದಾ ಹುಡುಗಿ’ ಎಂದು ಪಾತ್ರದ ಬಗ್ಗೆ ಎರಡೇ ಸಾಲಿನಲ್ಲಿ ಹೇಳಿ ಅವರು ಮಾತು ಮುಗಿಸಿದರು.
ವೆಂಕಟೇಶ್ ರೆಡ್ಡಿ ‘ಎಂಎಲ್ಎ’ಗೆ ಬಂಡವಾಳ ಹೂಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.