ಗೋಲ್ಡನ್ ಸ್ಟಾರ್ ಗಣೇಶ್ಗೆ ಸಣ್ಣಪುಟ್ಟ ಗಾಯಗಳಾದ ಸುದ್ದಿ `ಶೈಲೂ~ ಸಿನಿಮಾ ಚಿತ್ರೀಕರಣದ ಸ್ಥಳದಿಂದ ಬಂದಿದೆ. ಕೇರಳದ ಮುನ್ನಾರ್ನಲ್ಲಿ ಸೋಮವಾರ (ಆಗಸ್ಟ್ 1) ಸಾಹಸ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ ಗಣೇಶ್ ಡ್ಯೂಪ್ ಒಲ್ಲೆ ಎಂದರು.
ಡಿಫರೆಂಟ್ ಡ್ಯಾನಿ ಸಂಯೋಜಿಸಿದ್ದ ಸಾಹಸದಲ್ಲಿ ಎತ್ತರದಿಂದ ಜಿಗಿಯಬೇಕಿತ್ತು. ಗಣೇಶ್ ಖುದ್ದು ಜಿಗಿದರು. ಆಗ ಕೈಗೆ ತಾಗಿ ಗಾಜು ಚೂರಾಯಿತು. ಅದರಿಂದ ಚಿಮ್ಮಿದ ಕಣವೊಂದು ಅವರ ಕಣ್ಣಿಗೆ ಹೊಕ್ಕಿತು. ಕೈಗೂ ಕೊಂಚ ಪೆಟ್ಟಾಯಿತು. ಹತ್ತಿರದಲ್ಲೇ ನಿಂತಿದ್ದ ನಾಯಕಿ ಭಾಮಾ ಅವರ ಮುಖದ ಮೇಲೂ ಗಾಜಿನ ಚೂರು ಬಿದ್ದಿತು.
ನಿರ್ದೇಶಕ ಎಸ್.ನಾರಾಯಣ್ ಇಬ್ಬರಿಗೂ ತಕ್ಷಣವೇ ಚಿಕಿತ್ಸೆ ಕೊಡಿಸಿದರು. ಅಂಥ ಗಂಭೀರ ಸ್ವರೂಪದ ತೊಂದೆಯೇನೂ ಆಗಿಲ್ಲ ಎಂಬುದನ್ನು ವೈದ್ಯರು ಖಾತರಿಪಡಿಸಿದ್ದು, ಅಲ್ಲಿ ಮತ್ತೆ ಚಿತ್ರೀಕರಣ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.