`ಕೋಳಿ ಕೋತಿ~ಯ ಚೀನೀ ಕಥೆಯಿಂದ ಪ್ರೇರಿತಗೊಂಡು `ಕೋ...ಕೋ...~ ಚಿತ್ರ ನಿರ್ದೇಶಿಸಿದ ಮೈಲಾರಿ ಚಂದ್ರು ಈಗ ಮತ್ತೆ ಪ್ರೇಮಲೋಕದ ಟ್ರ್ಯಾಕ್ಗೆ ಮರಳಿದ್ದಾರೆ. `ತಾಜ್ಮಹಲ್~ ಎಂಬ ಪ್ರೇಮಸೌಧದ ಹೆಸರಿಟ್ಟು ಟ್ರ್ಯಾಜಿಡಿ ಸಿನಿಮಾ ಕೊಟ್ಟ ಅವರ ದೃಷ್ಟಿ ಈಗ ಬಿದ್ದಿರುವುದು ಮತ್ತೊಂದು ಪುರಾತನ ಸೌಧ `ಚಾರ್ಮಿನಾರ್~ ಮೇಲೆ. ಇದರ ಅಡಿ ಶೀರ್ಷಿಕೆ `ನಾಲ್ಕು `ಕಂಬ~ನಿಗಳ ಕಹಾನಿ~!
ಅಂದಹಾಗೆ, `ಚಾರ್ಮಿನಾರ್~ ಟ್ರ್ಯಾಜಿಡಿ ಸಿನಿಮಾವಲ್ಲ. ನಾಲ್ಕು ಕಂಬನಿಗಳು ಉದುರುವುದು ಚಿತ್ರದ ಅಂತ್ಯದಲ್ಲಿ ಮಾತ್ರ. ಉಳಿದಂತೆ ಮನೆಮಂದಿಯೆಲ್ಲಾ ಖುಷಿಯಾಗಿ ಕುಳಿತು ನೋಡುವ ಚಿತ್ರ ಇದು ಎಂಬ ಭರವಸೆ ಅವರದು.
`ಸಿನಿಮಾ ರಂಜನೆ~ ಜೊತೆ ಮಾತನಾಡಿದ ಅವರು, ಪ್ರೀತಿಯ ಮಡುವಿನಲ್ಲಿ ಹೊರಳಾಡುವ ಮಕ್ಕಳನ್ನು `ಚಾರ್ಮಿನಾರ್~ ನೋಡಲು ಚಿತ್ರಮಂದಿರಕ್ಕೆ ಪೋಷಕರೇ ಕಳುಹಿಸುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
`ಚಾರ್ಮಿನಾರ್~ ಬೆಂಗಳೂರು- ಹೈದರಾಬಾದ್ ಪಯಣದ ನಡುವಿನ ಒಂದು ಪ್ರೇಮಕಥೆ. ಚಿತ್ರ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿರಲಿ ಎಂದು ತಾನು ಕಂಡಿರುವ ಮತ್ತು ಕೇಳಿದ ಪ್ರೇಮ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರಂತೆ. `ತಾಜ್ಮಹಲ್~ ಚಿತ್ರದಂತೆಯೇ ಮನಕಲಕುವ ಪ್ರೇಮಕಥೆಯ ಚಿತ್ರವನ್ನು ನೀಡುವಂತೆ ಚಂದ್ರು ಅಭಿಮಾನಿಗಳು ಒತ್ತಾಯಿಸಿದ್ದರಂತೆ.
ತಮ್ಮ ಚಿತ್ರಗಳ ಬಗ್ಗೆ ಸಮೀಕ್ಷೆ ಮಾಡಿಸಿದ ಚಂದ್ರುಗೆ ತಿಳಿದುಬಂದಿರುವುದು, `ಚಂದ್ರು ನಿರ್ದೇಶನದ ಚಿತ್ರ~ ಎಂದು ಜನ ಗುರುತಿಸುತ್ತಾರೆ ಎಂದು. ಹೀಗಾಗಿ ಪ್ರೇಮಿಗಳಿಗಾಗಿ ಸತ್ಯಕಥೆಯನ್ನೇ ಚಿತ್ರವಾಗಿಸುತ್ತಿದ್ದೇನೆ ಎಂದರು.
ಚಿತ್ರಕ್ಕೆ ಇನ್ನೂ ನಾಯಕ ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ನಡೆದಿಲ್ಲ. ಅಜಯ್ರಾವ್ ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಡಿದ್ದರೂ ಅದಿನ್ನೂ ಖಚಿತವಾಗಿಲ್ಲ. ಚಿತ್ರದ ನಾಯಕನ ಪಾತ್ರ ಇಲ್ಲಿ ಪ್ರಮುಖವಾದುದು.
ಹೀಗಾಗಿ ಪಾತ್ರಕ್ಕೆ ಬದ್ಧರಾಗಿ ದುಡಿಯುವ ಕಲಾವಿದರನ್ನು ಆಯ್ಕೆ ಮಾಡುವುದು ತಮ್ಮ ಮುಂದಿರುವ ಗುರಿ ಎನ್ನುವ ಚಂದ್ರು, ಚಿತ್ರದ ಮುಹೂರ್ತದ ದಿನ ಪಾತ್ರವರ್ಗವನ್ನು ಬಹಿರಂಗಪಡಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.