ADVERTISEMENT

ಜೈಲಿನಿಂದಲೇ ಪತ್ನಿಗೆ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2013, 19:59 IST
Last Updated 26 ಜುಲೈ 2013, 19:59 IST
ಜೈಲಿನಿಂದಲೇ ಪತ್ನಿಗೆ ಉಡುಗೊರೆ
ಜೈಲಿನಿಂದಲೇ ಪತ್ನಿಗೆ ಉಡುಗೊರೆ   

ಜುಲೈ 22 ಮಾನ್ಯತಾ ಪಾಲಿಗೆ ಸಂಜಯ್ ಇಲ್ಲದ ಮತ್ತೊಂದು ದಿನವಷ್ಟೆ. ಅದು ಮಾನ್ಯತಾ ಅವರ ಜನ್ಮದಿನ. ಜೊತೆಗಿಲ್ಲದಿದ್ದರೂ ಪತ್ನಿಗೆ ಹುಟ್ಟುಹಬ್ಬದ ಉಡುಗೊರೆ ನೀಡುವುದನ್ನು ಸಂಜು ಮರೆತಿಲ್ಲ. ಜೈಲಿನಲ್ಲಿದ್ದುಕೊಂಡೇ ಮಾನ್ಯತಾಗೆ ಜನ್ಮದಿನದ ಉಡುಗೊರೆಯನ್ನು ಕಳುಹಿಸಿದ್ದಾರೆ.

ಮುಂಬೈ ಸರಣಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಯರವಾಡ ಜೈಲಿನಲ್ಲಿ ಕಳೆದ ಎರಡು ತಿಂಗಳಿನಿಂದ ಶಿಕ್ಷೆ ಅನುಭವಿಸುತ್ತಿರುವ ನಟ ಸಂಜಯ್ ದತ್, ಮಡದಿ ಮಾನ್ಯತಾ ಅವರ ಜನ್ಮದಿನಕ್ಕೆಂದು ಕವಿತೆಯೊಂದು ಬರೆದು ಅದರೊಂದಿಗೆ ಗುಲಾಬಿ ದಳಗಳನ್ನಿಟ್ಟು ಕಳುಹಿಸಿದ ಸುದ್ದಿ ವರದಿಯಾಗಿದೆ. ಈ ಪ್ರೇಮದ ಉಡುಗೊರೆಯಿಂದ ಗದ್ಗದಿತರಾದ ಮಾನ್ಯತಾಗೆ ಸಂಜಯ್ ದತ್ ಅವರ ಆರೋಗ್ಯದ್ದೇ ಚಿಂತೆಯಂತೆ. ಕಳೆದ ಶನಿವಾರ ಸಂಜಯ್ ಅವರನ್ನು ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಸಾಮಾನ್ಯವಾಗಿ ಪ್ರತಿ ಶನಿವಾರ ಸಂಜಯ್ ಅವರ ವಕೀಲರು ಅವರನ್ನು ಭೇಟಿಯಾಗಲು ಯರವಾಡ ಜೈಲಿಗೆ ಹೋಗುತ್ತಾರೆ. ಅದರಂತೆಯೇ ಜುಲೈ 20ರಂದು ಹೋಗಿದ್ದ ವಕೀಲರ ಕೈಯಲ್ಲಿ ತಮ್ಮ ಉಡುಗೊರೆಯನ್ನು ಮಾನ್ಯತಾಗೆ ನೀಡುವಂತೆ ಸಂಜಯ್ ನೀಡಿದ್ದರಂತೆ. ಮಾನ್ಯತಾ ಕೂಡ ತಮಗೆ ಉಡುಗೊರೆ ತಲುಪಿದ್ದನ್ನು ಪತ್ರದ ಮೂಲಕ ಸಂಜಯ್‌ಗೆ ತಿಳಿಸಿದ್ದಾರೆ.

ಇಬ್ಬರ ನಡುವೆ ದೂರವಾಣಿ ಸಂಪರ್ಕ ಇಲ್ಲದ ಕಾರಣ ಪ್ರತಿದಿನವೂ ಪರಸ್ಪರ ಒಂದು ಪತ್ರವನ್ನು ಬರೆಯುವ ಅಭ್ಯಾಸ ಬೆಳೆಸಿಕೊಂಡಿದ್ದಾರಂತೆ.ಸಂಜಯ್ ದತ್ ಜೈಲು ಸೇರಿದ ದಿನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳದ ಮಾನ್ಯತಾ, `ಪೊಲೀಸ್‌ಗಿರಿ' ಸಿನಿಮಾದ ಪ್ರೀಮಿಯರ್ ಪ್ರದರ್ಶನದಲ್ಲಿ ಮಾತ್ರ ಮಾಧ್ಯಮದವರೊಂದಿಗೆ ಮಾತನಾಡಿದ್ದರು. `ಪೊಲೀಸ್‌ಗಿರಿ' ಸಂಜಯ್ ಅಭಿನಯಿಸಿರುವ ಚಿತ್ರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT