ADVERTISEMENT

ತುಂಬಿದ ಭಾಗೀರತಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2012, 19:30 IST
Last Updated 28 ಜೂನ್ 2012, 19:30 IST
ತುಂಬಿದ ಭಾಗೀರತಿ
ತುಂಬಿದ ಭಾಗೀರತಿ   

ಕಲಾತ್ಮಕ ಅಂಶಗಳಿರುವ ಚಿತ್ರವೊಂದು ಒಂದು ವಾರ ಓಡುವುದು ಅಪರೂಪ. ಇಂಥ ಹೊತ್ತಿನಲ್ಲಿ `ಭಾಗೀರತಿ~ ಇಪ್ಪತ್ತೈದನೇ ದಿನಕ್ಕೆ ಕಾಲಿಟ್ಟಿದೆ. ಮಾತ್ರವಲ್ಲ ಹೊಸ ಹೊಸ ಪ್ರೇಕ್ಷಕರನ್ನು ಚಿತ್ರಮಂದಿರದೆಡೆಗೆ ಸೆಳೆಯುತ್ತಿದೆ.

ಗೆಲುವಿನ ಖುಷಿಯಲ್ಲಿದ್ದ ಚಿತ್ರದ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು, `ಕಲಾತ್ಮಕ ಚಿತ್ರಗಳು ಸೋಮವಾರ, ಮಂಗಳವಾರ ಹೀಗೆ `ಏಳು ವಾರ~ ಮಾತ್ರ ಓಡುತ್ತವೆ ಎಂದು ಸ್ವತಃ ನಾನೇ ಗೇಲಿ ಮಾಡುತ್ತಿದ್ದೆ.

ಆದರೆ ಚಿತ್ರ ಮೂರು ವಾರಗಳನ್ನು ಪೂರೈಸಿದೆ. ಸದಭಿರುಚಿಯ ಚಿತ್ರಗಳಿಗೂ ಪ್ರೇಕ್ಷಕರಿದ್ದಾರೆ ಎಂಬುದನ್ನು ಚಿತ್ರ ತೋರಿಸಿಕೊಟ್ಟಿದೆ~ ಎಂದರು. ಇದೇ ವೇಳೆ ಜನಪದ ಕಥನ ಮೂಢನಂಬಿಕೆಯನ್ನು ಪ್ರತಿಪಾದಿಸುವುದಿಲ್ಲ. ಬದಲಿಗೆ ಮೌಢ್ಯವನ್ನು ಒಳಗೊಂಡಿದೆ ಎಂದು ಸ್ಪಷ್ಟನೆ ನೀಡಿದರು.
 
ಅಲ್ಲದೆ ಜನಪದ ಗೀತೆಯನ್ನು ಹಾಗೆಯೇ ಬಳಸಿಕೊಂಡಿದ್ದರೆ ಚಿತ್ರದ ಸ್ವರೂಪವೇ ಬದಲಾಗುತ್ತಿತ್ತು, ಹಾಗಾಗಿ ಅದರಿಂದ ದೂರ ಉಳಿಯಬೇಕಾಯಿತು ಎಂದು ಉತ್ತರಿಸಿದರು. ಮೂಲಕತೆಯಲ್ಲಿ ಇಲ್ಲದ ಹಿರಿಸೊಸೆ ಕೆರೆಗೆ ಹಾರವಾಗುವ ಸಂದರ್ಭವನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರಂತೆ.

`ಭಾಗೀರತಿ~ ಬಿಡುಗಡೆಯಾದ ವಾರ `ಕ್ರೇಜಿಲೋಕ~ ಸೇರಿದಂತೆ ಅನೇಕ ಚಿತ್ರಗಳು ಪೈಪೋಟಿ ಒಡ್ಡಿದ್ದವು. ಅಲ್ಲದೆ ಅನ್ಯಭಾಷಾ ಚಿತ್ರಗಳ ಪ್ರವಾಹ ಕೂಡ ಜೋರಾಗಿಯೇ ಇತ್ತು. ಆದರೆ ಇದನ್ನೆಲ್ಲಾ ಮೀರಿ ನಿಂತಿದೆ ಸಿನಿಮಾ. ಆರು ಕೇಂದ್ರಗಳಲ್ಲಿ ಚಿತ್ರ ಈಗ ಓಡುತ್ತಿದೆ. ಅಲ್ಲದೆ ಹಾಸನ ಬಿಜಾಪುರ, ಬೆಳಗಾವಿಗಳಿಗೂ ಚಾಚಿಕೊಂಡಿದೆ.

ಚಿತ್ರಮಂದಿರಕ್ಕೆ ಬಾಡಿಗೆ ಕಟ್ಟಿ ಓಡಿಸಲಾಗುತ್ತಿದೆಯೇ ಎಂದು ಕೆಲವರು ಪ್ರಶ್ನಿಸಿದ್ದರಂತೆ. ಅದಕ್ಕೆ ಉತ್ತರಿಸಿದ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ `ಚಿತ್ರಮಂದಿರಕ್ಕೆ ಬಾಡಿಗೆ ಕಟ್ಟಿ ಚಿತ್ರ ಓಡಿಸುವ ಪರಿಪಾಠ ನನ್ನದಲ್ಲ. `ಮಂದಾಕಿನಿ~ಗೆ ಹಾಗೆ ಮಾಡಿದ್ದು ನಿಜ. ಆದರೆ `ಜೋಗಯ್ಯ~, `ಅಲೆಮಾರಿ~ ಮುಂತಾದ ಚಿತ್ರ ಮಾಡುವ ಹೊತ್ತಿಗೆ ಆ ಅಭ್ಯಾಸ ಹೊರಟು ಹೋಯಿತು~ ಎಂದರು.

ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷರೂ ಆಗಿರುವ ಚಿತ್ರದ `ಹಿರಿಸೊಸೆ~ ತಾರಾ `ಇಂಥ ಚಿತ್ರಗಳನ್ನು ಜನರಿಗೆ ತಲುಪಿಸಲು ಅಕಾಡೆಮಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ `ಬೆಳ್ಳಿ ಮಂಡಲ~ ಕೂಡ ಒಂದು. ಇದರ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಸದಭಿರುಚಿಯ ಚಿತ್ರಗಳನ್ನು ತೋರಿಸುವ ಗುರಿ ಇದೆ~ ಎಂದು ಹೇಳಿದರು.
ಚಿತ್ರದ ಎಲ್ಲಾ ಪಾತ್ರಗಳು ಕತೆಯನ್ನು ಚಂದವಾಗಿ ರೂಪಿಸಿರುವುದಕ್ಕೆ ಚಿತ್ರದ ಕೇಂದ್ರಬಿಂದು ನಟಿ ಭಾವನಾ ಸಂತಸ ವ್ಯಕ್ತಪಡಿಸಿದರು. ನಟಿಯರಾದ ವತ್ಸಲಾ ಮೋಹನ್, ಹರಿಣಿ, ಛಾಯಾಗ್ರಾಹಕ ಹರೀಶ್ ಎನ್. ಸೊಂಡೆಕೊಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ವಿದ್ಯಾರ್ಥಿಗಳತ್ತ ಚಿತ್ತ

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಭಾಗೀರತಿ ಚಿತ್ರತಂಡ ಚಿತ್ರವನ್ನು ರಿಯಾಯ್ತಿ ದರದಲ್ಲಿ ವಿದ್ಯಾರ್ಥಿಗಳಿಗೆ ತೋರಿಸಲು ಮುಂದಾಗಿದೆ. ಬರಗೂರರ ಈ ಚಿಂತನೆಗೆ ನಿರ್ಮಾಪಕರು ನೀರೆರೆದು ಪೋಷಿಸಿದ್ದಾರೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅರ್ಧದಷ್ಟು ಬೆಲೆಗೆ ಟಿಕೆಟ್ ನೀಡಿ ಚಿತ್ರ ತೋರಿಸಲು ಮುಂದಾಗಿದ್ದಾರೆ. ಹಣ ಬಾರದಿದ್ದರೂ ಚಿಂತೆಯಿಲ್ಲ, ಹೆಚ್ಚು ಮಂದಿಗೆ, ಅದರಲ್ಲಿಯೂ ಯುವ ಮನಸ್ಸುಗಳಿಗೆ ಚಿತ್ರ ತಲುಪುವಂತಾಗಬೇಕು ಎಂದು ಚಿತ್ರತಂಡ ನಿರ್ಧರಿಸಿದೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.