ADVERTISEMENT

ನವನವೋನ್ಮೇಷ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

`ಅಂದು ನನಗಿದ್ದದ್ದು ಕೇವಲ ಸಿನಿಮಾ ಮಾಡುವ ಹುಮ್ಮಸ್ಸು ಅಷ್ಟೇ. ಅಪ್ರಬುದ್ಧ ಮನಸ್ಥಿತಿ ಇದ್ದ ಕಾರಣ `ಲಂಕೇಶ್ ಪತ್ರಿಕೆ~ ಸಿನಿಮಾದ ಕತೆಗೆ ಸಂಪೂರ್ಣ ನ್ಯಾಯ ಒದಗಿಸಲು ಆಗಿರಲಿಲ್ಲ. ಆದರೆ ಇಂದು ಬದಲಾಗಿರುವೆ...`

`ದೇವ್ ಸನ್ ಆಫ್ ಮುದ್ದೇಗೌಡ~ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಇಂದ್ರಜಿತ್ ಕ್ಷಣ ಭಾವುಕರಾದರು. ಅನಂತನಾಗ್ ಅವರೊಂದಿಗೆ ಈ ಮೊದಲು ಕೆಲಸ ಮಾಡಿದ `ಲಂಕೇಶ್ ಪತ್ರಿಕೆ~ ದಿನಗಳಿಗೆ ಜಾರಿದ ಅವರು ತಮ್ಮನ್ನು ತಾವು ವಿಶ್ಲೇಷಿಸಿಕೊಳ್ಳುವ ಧಾಟಿಯಲ್ಲಿ ಮಾತನಾಡಿದರು.

`ದೇವ್...~ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಕೆಲಸ ನಿರ್ವಹಿಸುತ್ತಿರುವ ಅವರಿಗೆ ಈ ಚಿತ್ರ ತಮ್ಮ ಹಿಂದಿನ ಚಿತ್ರಗಳಂತಿಲ್ಲ ಎನಿಸಿದೆ. `ಅಪ್ಪನೊಂದಿಗೆ `ಅನುರೂಪ~ ಚಿತ್ರೀಕರಣದ ಸೆಟ್‌ಗೆ ಹೋಗುವಾಗ ಅನಂತನಾಗ್ ಅವರನ್ನು ನೋಡಿದ್ದೆ. ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕುತ್ತದೆ ಎನಿಸಿರಲೇ ಇಲ್ಲ. ಅವರಂಥ ನಟರು ಇದ್ದರೆ ತುಂಬಾ ಕಂಫರ್ಟಬಲ್ ಆಗಿ ಕೆಲಸ ಮುಗಿಸಬಹುದು~ ಎಂದರು.

`ದೇವ್..~ ತುಂಬಾ ಕಷ್ಟಕರ ಸಬ್ಜೆಕ್ಟ್ ಇರುವ ಸಿನಿಮಾ. ಮಂಡ್ಯದ ಹಳ್ಳಿಯೊಂದರಿಂದ ಬರುವ ಮುದ್ದೇಗೌಡ ಕಷ್ಟಪಟ್ಟು ಜೀವನದಲ್ಲಿ ಯಶಸ್ವಿಯಾಗಿ ತನ್ನ ಯೌವನದಲ್ಲಿ ಕಳೆದುಕೊಂಡ ಬದುಕಿನ ಸುಖವನ್ನು ಮಗನಲ್ಲಿ ಕಾಣಲು ಇಷ್ಟಪಡುತ್ತಾನೆ. ಆದರೆ ಮಗ ಏನು ಮಾಡುತ್ತಾನೆ? ಎಂಬುದೇ ಚಿತ್ರದ ಕತೆ. ಎಂದರು.

ಮುದ್ದೇಗೌಡನಾಗಿ ನಟಿಸಿರುವ ಅನಂತನಾಗ್ ಅವರಿಗೂ ಇಂದ್ರಜಿತ್ ಪ್ರಬುದ್ಧವಾಗಿದ್ದಾರೆ ಎನಿಸಿದೆ. `ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ಇದ್ದದ್ದಕ್ಕೂ ಇಂದಿಗೂ ಇಂದ್ರಜಿತ್ ಸಾಕಷ್ಟು ಬೆಳೆದಿದ್ದಾರೆ. ಅವರು ಈ ಸಿನಿಮಾದ ಸಬ್ಜೆಕ್ಟ್ ಹೇಳಿದಾಗ ನನಗೆ ಆತಂಕವಾಯಿತು. ನನ್ನ ಶಂಕೆಗಳನ್ನು ನೇರವಾಗಿ ಹೇಳದೇ ಎಸ್‌ಎಂಎಸ್ ರೂಪದಲ್ಲಿ ಅವರಿಗೆ ಕಳುಹಿಸುತ್ತಿದ್ದೆ.

ಯಾವುದೇ ಮುಜುಗರ ಇಲ್ಲದೇ ಅವರು ಅದನ್ನು ಪರಿಹರಿಸುತ್ತಿದ್ದರು. ಕಲಾವಿದರಿಗೆ ಒತ್ತಡ ನೀಡದೇ ಕೆಲಸ ತೆಗೆಯುವ ಇಂದ್ರಜಿತ್ ಪಕ್ವ ನಿರ್ದೇಶಕರಾಗಿದ್ದಾರೆ~ ಎಂದು ನಕ್ಕರು. ನಾಯಕ ದಿಗಂತ್, ನಿರ್ಮಾಪಕಿ ಶಿಲ್ಪಾ ರಮೇಶ್ ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.