ಮುಂಬೈ: ‘ಪದ್ಮಾವತಿ’ ಚಿತ್ರದ ವಿವಾದ ಕುರಿತಂತೆ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಎದುರು ಗುರುವಾರ ಹಾಜರಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ‘ಚಿತ್ರದ ಕಥೆ ಇತಿಹಾಸವನ್ನು ಆಧರಿಸಿದ್ದಲ್ಲ. 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಯಾಸಿ ರಚಿಸಿರುವ ‘ಪದ್ಮಾವತ್’ ಕಾವ್ಯದ ಆಧಾರದ ಮೇಲೆ ಚಿತ್ರಕಥೆ ರೂಪಿಸಲಾಗಿದೆ’ ಎಂದು ಹೇಳಿದ್ದಾರೆ.
‘ನಾನು ಚಿತ್ರದಲ್ಲಿ ಇತಿಹಾಸಕ್ಕೆ ಚ್ಯುತಿ ತಂದಿಲ್ಲ. ಗಾಳಿ ಸುದ್ದಿಗಳಿಂದ ಚಿತ್ರದ ಕುರಿತಾಗಿ ವಿವಾದ ಎದ್ದಿದೆ’ ಎಂದು ಬನ್ಸಾಲಿ ಸಮಿತಿಗೆ ತಿಳಿಸಿದ್ದಾರೆ.
ಬಿಜೆಪಿ ಸಂಸದ ಅನುರಾಗ್ ಠಾಕೂರ್, ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಮತ್ತು ಚಿತ್ರ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಅವರಿದ್ದ ಸಂಸದೀಯ ಸಮಿತಿಯು ಬನ್ಸಾಲಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.
‘ಸಿನಿಮಾಟೊಗ್ರಫಿ ಕಾಯ್ದೆಯ ಪ್ರಕಾರ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್) ಚಿತ್ರವನ್ನು ಪ್ರಮಾಣೀಕರಿಸಲು 68 ದಿನ ಕಾಲಾವಕಾಶ ತೆಗೆದುಕೊಳ್ಳಬಹುದು. ಹೀಗಿರುವಾಗ ಚಿತ್ರದ ಪ್ರಮಾಣೀಕರಣಕ್ಕಾಗಿ ನವೆಂಬರ್ 11ರಂದು ಸಿಬಿಎಫ್ಸಿಗೆ ಅರ್ಜಿ ಸಲ್ಲಿಸಿ ಡಿಸೆಂಬರ್ 1ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಹೇಗೆ ಘೋಷಿಸಿದಿರಿ?’ ಎಂದು ಸಮಿತಿಯು ಬನ್ಸಾಲಿ ಅವರನ್ನು ಪ್ರಶ್ನಿಸಿದೆ ಎಂದು ಮೂಲಗಳು ಹೇಳಿವೆ.
‘ವಿವಾದ ಎಬ್ಬಿಸಿ ಚಿತ್ರಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಾಧ್ಯಮಗಳೂ ಇಂಥ ವಿವಾದಗಳನ್ನು ಪೋಷಿಸುತ್ತಿವೆ’ ಎಂದು ಸಮಿತಿ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.