ADVERTISEMENT

ಮಂದಿರಾ ಹರ್ಷ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

‘ನಿಖಿತಾ ನಿಖಿತಾ’ ಎಂದು ಜನರು ಕೂಗಿದಾಗ ಒಳಗೊಳಗೇ ಖುಷಿಯಾಗುತ್ತದೆ. ಮನಸು 19 ವರ್ಷಗಳ ಹಿಂದೆ ಕರೆದೊಯ್ಯುತ್ತದೆ. ಆಗ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನರು ‘ಶಾಂತಿ ಶಾಂತಿ’ ಎಂದು ಕೂಗುತ್ತಿದ್ದರು. ಟಿ.ವಿ.  ಧಾರಾವಾಹಿ ‘24’ರ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ ಎಂದು ಮಂದಿರಾ ಬೇಡಿ ಹೇಳಿಕೊಂಡಿದ್ದಾರೆ.

ಜನರಿಗೆ ಬದಲಾವಣೆ ಬೇಕಿತ್ತು. ಹೆಣ್ಣುಮಕ್ಕಳನ್ನು ಕೆಟ್ಟವರನ್ನಾಗಿ ತೋರಿಸುವ ಸಾಸ್‌– ಬಹು (ಅತ್ತೆ–ಸೊಸೆ) ಧಾರಾವಾಹಿಗಿಂತ ಭಿನ್ನವಾಗಿರುವ ಕಾರ್ಯಕ್ರಮಗಳಿಗಾಗಿ ಹಾತೊರೆಯುತ್ತಿದ್ದರು. ಹೀಗಾಗಿ 24 ಧಿಡೀರನೆ ಟಿಆರ್‌ಪಿ ಲೆಕ್ಕದಲ್ಲಿ ಉತ್ತುಂಗಕ್ಕೇರಿದೆ.

ಆದರೆ ಪಾತ್ರದ ಹೆಸರಿನಲ್ಲಿ ಜನರು ಕಲಾವಿದರನ್ನು ಗುರುತಿಸಿದಾಗ ಆಗುವ ಸಂತೋಷವೇ ಬೇರೆ. ನನ್ನ ಜೀವನದಲ್ಲಿ ಕೇವಲ ಎರಡು ಸಲ ಆಡಿಶನ್‌ಗೆ ಹೋಗಿದ್ದು. ಒಂದು 19 ವರ್ಷಗಳ ಹಿಂದೆ; ನಟನೆಯ ಪ್ರಯಾಣ ಆರಂಭಿಸುವಾಗ, ‘ಶಾಂತಿ’ ಧಾರಾವಾಹಿಗಾಗಿ. ಇನ್ನೊಂದು– ಇದೀಗ ಭಿನ್ನ ಕತೆಯೆಂಬ ಕಾರಣಕ್ಕೆ ‘24’ ಧಾರಾವಾಹಿಗೆ. ನಿಖಿತಾ ಪಾತ್ರದ ಜನಪ್ರಿಯತೆ ಕಂಡು ಮೂಕಳಾಗಿದ್ದೇನೆ ಎನ್ನುತ್ತಾರೆ ಅವರು.

ತಾಯ್ತನದೊಂದಿಗೆ ವೃತ್ತಿ ನಿರ್ವಹಣೆಯ ಬಗ್ಗೆ ಮಾತನಾಡುವಾಗ ಸಹಜವಾಗಿಯೇ ಮಂದಿರಾ ಗದ್ಗದಿತರಾಗುತ್ತಾರೆ. ಮಗ ವೀರ್‌ ಹುಟ್ಟಿದ ಮೇಲೆ ಇದೇ ಮೊದಲ ಸಲ ರಾತ್ರಿ ಸಮಯದ ಶೂಟಿಂಗ್‌ಗಾಗಿ ಮನೆಯಿಂದ ಆಚೆ ಕಾಲಿಟ್ಟಿದ್ದಾರೆ ಮಂದಿರಾ.

ಪ್ರತಿ ರಾತ್ರಿಯೂ ಪುಟ್ಟ ಕೈಗಳ ಅಪ್ಪುಗೆಯೊಂದಿಗೆ ಮಲಗುವ ಮಂದಿರಾಗೆ ಕೆಲವೊಮ್ಮೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಆಗುವುದೇ ಇಲ್ಲವಂತೆ. ‘ಮಗುವನ್ನು ಬಿಟ್ಟು ಹೊರಗಿದ್ದಾಗಲೇ ಕಷ್ಟ ಏನೆಂದು ಅರಿವಾಗುವುದು. ಈಗ ಮಲಗಿರಬಹುದೆ? ಆಗಾಗ ಕೊರಳು ಮುಟ್ಟಿ ಮುಟ್ಟಿ ನೋಡುವ ಕಾತರ. ಆ ಸ್ಪರ್ಶದ ಮಾಂತ್ರಿಕತೆ ಅಲ್ಲಿದೆಯೇನೋ... ಎಂದು. ಹನಿಕಂಗಳನ್ನು ಮುಚ್ಚಿಡುವುದು ಸುಲಭವೇನಲ್ಲ.

ಆದರೆ ನಾನೀಗ ಎಲ್ಲವನ್ನೂ ನಿಭಾಯಿಸಬಲ್ಲೆ. ನಮ್ಮ ಅನಿವಾರ್ಯಕ್ಕೆ ಮಕ್ಕಳನ್ನು ತೊರೆಯುವುದು ಕಠಿಣ ಸನ್ನಿವೇಶವೇ ಸರಿ’ ಎನ್ನುತ್ತಾರೆ ಮಂದಿರಾ ಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.