ADVERTISEMENT

‘ಮುತ್ತು’ ಕಟ್ಟಿಕೊಟ್ಟ ಪ್ರೀತಿಯ ಕಥೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಮುತ್ತು
ಮುತ್ತು   

ಬೆಂಗಳೂರಿಗೆ ಸಮೀಪದಲ್ಲಿ ಇರುವ ನಂದಿ ಬೆಟ್ಟದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಘಟನೆ ಆಧರಿಸಿ ಎಂ.ಎಂ. ಮುತ್ತು ಕಟ್ಟಿಕೊಟ್ಟಿರುವ ಸಿನಿಮಾ ‘ಪ್ರೀತಿಯ ರಾಯಭಾರಿ’. ಇದು ಶುಕ್ರವಾರ ತೆರೆಗೆ ಬರುತ್ತಿದೆ.

ಸಿನಿಮಾ ತೆರೆಗೆ ಬರುವ ದಿನಾಂಕ ಹತ್ತಿರವಾಗುವಾಗ ಸಿನಿಮಾ ತಂಡದಲ್ಲಿ ಕುತೂಹಲ ಮತ್ತು ಆತಂಕ ಮನೆಮಾಡುವುದು ಸಹಜ. ಬಹುಶಃ ಇವೆರಡೂ ಭಾವಗಳನ್ನು ಇಟ್ಟುಕೊಂಡೇ ಸಿನಿತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಆರು ವರ್ಷಗಳ ಹಿಂದೆ ಒಂದು ಸುದ್ದಿಯನ್ನು ಮಾಧ್ಯಮಗಳ ಮೂಲಕ ಗಮನಿಸಿದ್ದೆ. ಅದು ನಂತರ ಕ್ರೈಂ ಸುದ್ದಿಯಾಗಿಯೂ ಪ್ರಸಾರವಾಯಿತು. ಅದನ್ನೇ ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ’ ಎಂದರು ಮುತ್ತು.

ಅವರು ಈ ಸಿನಿಮಾದ ಕೊನೆಯ ಭಾಗವನ್ನು ವಿಭಿನ್ನವಾಗಿ ರೂಪಿಸಿದ್ದಾರಂತೆ. ‘ಈ ರೀತಿಯ ಕ್ಲೈಮ್ಯಾಕ್ಸ್‌ ಅನ್ನು ಹೆಣ್ಣುಮಕ್ಕಳು ಸ್ವೀಕರಿಸುತ್ತಾರಾ ಎಂಬ ಭಯ ಇತ್ತು. ಆದರೆ ಆಯ್ದ ಕೆಲವರಿಗೆ ಸಿನಿಮಾ ತೋರಿಸಿದಾಗ, ಕ್ಲೈಮ್ಯಾಕ್ಸ್‌ ಬಗ್ಗೆ ಹೆಣ್ಣುಮಕ್ಕಳೇ ಮೆಚ್ಚುಗೆ ಸೂಚಿಸಿದ್ದಾರೆ’ ಎಂದು ಮುತ್ತು ಖುಷಿಯಿಂದ ಹೇಳಿಕೊಂಡರು. ಇಷ್ಟೆಲ್ಲ ಹೇಳಿದ ಅವರು, ಕ್ಲೈಮ್ಯಾಕ್ಸ್‌ ಬಗ್ಗೆ ಹೆಚ್ಚು ಮಾಹಿತಿ ಕೊಡಲಿಲ್ಲ.

ADVERTISEMENT

ನಕುಲ್ ಅವರು ಈ ಸಿನಿಮಾ ಮೂಲಕ ನಾಯಕ ನಟನಾಗಿ ‘ಚಂದನವನ’ ಪ್ರವೇಶಿಸುತ್ತಿದ್ದಾರೆ. ‘ನಾಯಕನ ಪಾತ್ರದಲ್ಲಿ ಒಂದಿಷ್ಟು ಹೀರೊಯಿಸಂ ಬೇಕು ಎಂದು ಬಯಸುವವರು ಇದ್ದಾರೆ. ಆದರೆ, ಪಾತ್ರದಲ್ಲಿ ಅಭಿನಯಕ್ಕೆ ಅವಕಾಶ ಇರಬೇಕು ಎಂದು ನಾನು ಬಯಸಿದ್ದೆ’ ಎಂದರು ನಕುಲ್. ಅವರು ನಟನೆಯ ವಿಚಾರದಲ್ಲಿ ಒಂದೂವರೆ ವರ್ಷ ತರಬೇತಿ ಕೂಡ ಪಡೆದಿದ್ದಾರಂತೆ. ಚಿತ್ರದ ಚಿತ್ರೀಕರಣವು ಹಿರಿಯೂರು ಬಳಿಯ ಹಳ್ಳಿಯೊಂದರಲ್ಲಿ ನಡೆದಿದೆ.

ಚಿತ್ರದ ಸಂಗೀತ ಅರ್ಜುನ್ ಜನ್ಯ ಅವರದ್ದು. ಚಿತ್ರತಂಡಕ್ಕೆ ಶುಭ ಹಾರೈಸಲು ಅವರೂ ಸುದ್ದಿಗೋಷ್ಠಿಗೆ ಬಂದಿದ್ದರು. ‘ವಯಸ್ಸಿಗೆ ಬಂದಿರುವ ಹುಡುಗರ ತಂದೆ, ತಾಯಿ ನೋಡಬೇಕಾದ ಸಿನಿಮಾ ಇದು’ ಎಂದರು ಅರ್ಜುನ್.

‘ನನ್ನ ಪಾಲಿಗೆ ಇದು ವಿಶೇಷ ಸಿನಿಮಾ. ಇದರಲ್ಲಿ ಗ್ಲಾಮರ್‌ಗಿಂತಲೂ ಅಭಿನಯಕ್ಕೆ ಹೆಚ್ಚಿನ ಅವಕಾಶ ಇದೆ. ಈ ಪಾತ್ರ ಒಪ್ಪಿಕೊಳ್ಳಲು ನಾನು ಎರಡು ದಿನ ಆಲೋಚಿಸಿದ್ದೆ’ ಎಂದರು ನಟಿ ಸುಕೃತಾ ದೇಶಪಾಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.